ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಕೋಟೆಗಿರಿ ಗ್ರಾಮದಲ್ಲಿ ರಾಜ ಚೋಳ-1 ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕುರುಹು ಇಲ್ಲವಾಗಿದ್ದು, ಜತೆಗೆ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡಿನ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದರ ಬೆನ್ನಲ್ಲೇ ಈಗ ಇತಿಹಾಸ ತಜ್ಞರು ಈ ದೇಗುಲದ ಕುರುಹುಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಬಳಿ ಈ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ಈ ದೇವಾಲಯಯನ್ನು ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಪತ್ತೆ ಮಾಡಲು ಮುಂದಾಗಬೇಕು ಎಂದು ತಮಿಳುನಾಡಿನ ಮಾಜಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎ.ಜಿ. ಪೊನ್ ಮಾಣಿಕ್ಕವೆಲ್ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರದಲ್ಲಿ, ರಾಜರಾಜ ಚೋಳ-1 ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರ ಉದಯರ್ ರಾಜಾಧಿ ರಾಜ ದೇವರು-1 ಕುಣಿಗಲ್ನಲ್ಲಿ ರಾಜೇಂದ್ರ ಚೋಳಪುರಂ ಎಂಬ ಪಟ್ಟಣವನ್ನು ಸ್ಥಾಪಿಸಿದ್ದರು. 949 ವರ್ಷಗಳ ಹಿಂದೆ ಕುಣಿಗಲ್ನಿಂದ 5 ಕಿ. ಮೀ. ದೂರದಲ್ಲಿರುವ ಕೋಟೆಗಿರಿ ಗ್ರಾಮದಲ್ಲಿ ತಮ್ಮ ತಂದೆಯ ನೆನಪಿಗಾಗಿ ರಾಜೇಂದ್ರ ಚೋಳೀಶ್ವರಂ ಎಂಬ ದೇವಾಲಯವನ್ನು ನಿರ್ಮಿಸಲಾಗಿತ್ತು.
ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು (ಈ ವಿಗ್ರಹವನ್ನು ರಾಜಾಧಿರಾಜ ವಿಂಧಗರ್ ಎಂದು ಕರೆಯುತ್ತಾರೆ) ದಾನ ಮಾಡಿದ್ದರು. ಇದು ಅಪರೂಪದ ಕಲ್ಲಿನ ವಿಗ್ರಹವಾಗಿದೆ ಎಂಬುದನ್ನು ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಪಿ.ಕೆ.ಸೇಕರ್ಬಾಬು ತಮ್ಮ ಲೇಖನದಲ್ಲಿ ಉಲ್ಲೇಖೀಸಿದ್ದಾರೆ. ಅವರ ಆಪ್ತ ಮೂಲಗಳು ದೇವಾಲಯದ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮಾಣಿಕ್ಕವೇಲ್ ತಮಿಳುನಾಡು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಕುಣಿಗಲ್ನ ಕೋಟೆಗಿರಿಯಲ್ಲಿ ದೇವಾಲಯ ಮತ್ತು ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು, ದೇವಾಲಯ ಇರುವ ಪ್ರದೇಶವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು ಎಂದಿದ್ದಾರೆ. ತಮಿಳುನಾಡಿನ ಅಧಿಕಾರಿಗಳು ಶಿಲಾ ಶಾಸನಗಳನ್ನು ವಾಪಸ್ ಪಡೆಯಬೇಕು ಎಂದು ಮಾಣಿಕ್ಕವೇಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಡ್ರೋನ್ ನೋಟ : ಮತ್ತೆ ಮತ್ತೆ ನೋಡಬೇಕೆನ್ನುವ ಹೊಗೆನಕಲ್ ದೃಶ್ಯಕಾವ್ಯ..