ತುಮಕೂರು: ಪೊಲೀಸ್ ಠಾಣೆಗಳಿಗೆ ಬರುವ ಸಣ್ಣ - ಪುಟ್ಟ ಗಲಾಟೆ ಪ್ರಕರಣಗಳನ್ನು ತಕ್ಷಣ ಸ್ಥಳಕ್ಕೆ ತೆರಳಿ ಪರಿಹರಿಸುವ ಕೆಲಸ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಇಂತಹ ಪ್ರಕರಣಗಳನ್ನು ಆದಷ್ಟು ಬೇಗ ಬಗೆಹರಿಸುತ್ತಿರುವುದರಿಂದ ಪೊಲೀಸರ ಒತ್ತಡ ಕೂಡ ಕಡಿಮೆಯಾಗುತ್ತಿದೆ. ಈ ರೀತಿಯ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ.
ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿಸುವ ದೃಷ್ಟಿಯಿಂದ, ಜಿಲ್ಲೆಗೆ ಹೊಸದಾಗಿ 'ಹೊಯ್ಸಳ' ವಾಹನಗಳು ಬಂದಿವೆ. ಹೊಯ್ಸಳ ಪಡೆಯ ಕಾರ್ಯದಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಹೆಚ್ಚುತ್ತಿದೆ. ಹೀಗಾಗಿ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ಮೂಲಕ ಪೊಲೀಸ್ ಇಲಾಖೆ ಜನರ ಸಣ್ಣಪುಟ್ಟ ಸಮಸ್ಯೆಗೆ ತಿಲಾಂಜಲಿ ಇಡುತ್ತಿದೆ. ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ 40 ದಿನಗಳಲ್ಲಿ 523 ದೂರುಗಳು ದಾಖಲಾಗಿದ್ದು, ಎಲ್ಲ ದೂರುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 19 ಹೊಯ್ಸಳ ಪಡೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
ತುಮಕೂರು ತಾಲೂಕಿನಲ್ಲಿ ಐದು, ಕುಣಿಗಲ್, ತಿಪಟೂರು, ಶಿರಾ, ಪಾವಗಡ, ಮಧುಗಿರಿ ತಾಲೂಕಿನಲ್ಲಿ ತಲಾ ಎರಡು ವಾಹನಗಳು ನಿರಂತರ ಗಸ್ತು ತಿರುಗುತ್ತಿವೆ. ಚಿಕ್ಕನಾಯಕನಹಳ್ಳಿ, ತುರುವೇಕೆರೆ , ಗುಬ್ಬಿ ಕೊರಟಗೆರೆ, ತಾಲೂಕಿನಲ್ಲಿ ತಲಾ ಒಂದು ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ.
ಒಂದೇ ಭಾರತ ಒಂದೇ ತುರ್ತು ಕರೆ ಯೋಜನೆ ಜಾರಿಗೊಳಿಸಿದ ಕೇಂದ್ರ:
ಇತ್ತೀಚೆಗೆ ಕೇಂದ್ರ ಸರ್ಕಾರ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಯೋಜನೆ ಜಾರಿಗೊಳಿಸಿದೆ. 112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಲ್ಲಿರುವ ಕಂಟ್ರೋಲ್ ರೂಮ್ ತಲುಪುತ್ತದೆ. ನಂತರ ಆ ದೂರನ್ನು ಜಿಲ್ಲಾ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಸಿಬ್ಬಂದಿ ತಕ್ಷಣವೇ ದೂರು ಯಾವ ಸ್ಥಳದಿಂದ ಬಂದಿದೆ ಎಂಬುದನ್ನು ಪರಿಶೀಲಿಸಿ, ಘಟನಾ ಸ್ಥಳದ ಬಗ್ಗೆ ಮಾಹಿತಿ ಪಡೆದು ಆ ಸ್ಥಳಕ್ಕೆ ಸಮೀಪದಲ್ಲಿರುವ ಹೊಯ್ಸಳ ಪಡೆಗೆ ಮಾಹಿತಿ ಮುಟ್ಟಿಸುತ್ತಾರೆ.
ಇದನ್ನು ಓದಿ:ಮಲೆನಾಡ ಸ್ವಚ್ಛತೆಗೆ ಮುಂದಾದ ತರಬೇತಿ ನಿರತ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಸ್
ಇದರಿಂದಾಗಿ ಪೊಲೀಸರು ಕನಿಷ್ಠ 20ರಿಂದ 30 ನಿಮಿಷಗಳಲ್ಲಿ ಘಟನೆ ನಡೆದ ಸ್ಥಳಕ್ಕೆ ತೆರಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿರುವಂತಹ ತುಮಕೂರು ಜಿಲ್ಲಾ ಪೊಲೀಸರು 112 tumakuru ಎನ್ನುವ ಫೇಸ್ಬುಕ್ ಪೇಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಯ್ಸಳ ಪಡೆಯ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಅಲ್ಲದೇ ಪೊಲೀಸ್ ಇಲಾಖೆಯ ಪ್ರತಿಯೊಂದು ವಾಹನದ ಮೇಲೆಯೂ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಪ್ರಚಾರ ಮಾಡಲಾಗುತ್ತಿದೆ. ಹೊಯ್ಸಳ ಪಡೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಣ್ಣಪುಟ್ಟ ಪ್ರಕರಣಗಳನ್ನು ಆದಷ್ಟು ಬೇಗ ಪರಿಹರಿಸುತ್ತಿರುವುದರಿಂದ ಪೊಲೀಸರಿಗೆ ದೊಡ್ಡ ಪ್ರಕರಣಗಳ ತನಿಖೆ ನಡೆಸಲು ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ.