ತುಮಕೂರು: ಆನ್ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಸೇರಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಎಂಜಿನಿಯರಿಂಗ್ ಉಪನ್ಯಾಸಕ ಮಹಾಂತೇಶ್ ಹಾಗೂ ವಿದ್ಯಾರ್ಥಿಗಳಾದ ಅರ್ಜುನ್, ರಾಜೇಶ್, ದಿಲೀಪ್ ಕುಮಾರ್, ಅಶ್ವಿನ್, ಧನುಷ್ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಫೆಬ್ರವರಿ 9ರಂದು ವಿಶೇಷ ಪೊಲೀಸ್ ತಂಡವು ನಗರದ ಬೀಚ್ ರಸ್ತೆಯಲ್ಲಿನ ಲಾಡ್ಜ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು ಮೊಬೈಲ್ ಮೂಲಕ ಲೋಟಸ್ ಎಂಬ ಅಪ್ಲಿಕೇಶನ್ ಹಾಗೂ ಸ್ಪೆಕ್ಟಿಕ್ಯುಲಸ್ ಎಂಬ ಆ್ಯಪ್ ಅನ್ನು ಬಳಸಿ ಬೆಟ್ಟಿಂಗ್ನಲ್ಲಿ ತೊಡಗಿದ್ದರು ಎನ್ನಲಾಗಿದೆ.
ದಾಳಿ ವೇಳೆ 4 ಎಟಿಎಂ ಕಾರ್ಡ್ಗಳು, 6 ಮೊಬೈಲ್ಗಳು, 3 ಲೆಡ್ ಪೆನ್ನು ಮತ್ತು 68,730 ರೂ. ನಗದು ಸೇರಿದಂತೆ 4 ರಿಜಿಸ್ಟರ್ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನಗರದ ಬ್ಯಾಂಕ್ವೊಂದರಲ್ಲಿ ಬಸವರಾಜ್, ರಂಜಿತ್, ನಿತಿನ್ ಎಂಬುವವರ ಹೆಸರಿನಲ್ಲಿ 3 ಖಾತೆಗಳನ್ನು ತೆರೆದು ಬೆಟ್ಟಿಂಗ್ ವ್ಯವಹರಿಸುತ್ತಿದ್ದರು. ಈವರೆಗೆ ಬೆಟ್ಟಿಂಗ್ನಲ್ಲಿ ಅಂದಾಜು 6.47 ಲಕ್ಷ ರೂ. ವಹಿವಾಟು ನಡೆಸಿದ್ದಾರೆ. ಎಲ್ಲ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಟ್ಟಿಂಗ್ ಮೂಲಕ ದೊರೆತ ಹಣದಲ್ಲಿ ಶೇ.40ರಷ್ಟು ಹಣವನ್ನು ಸ್ಪೆಕ್ಟಿಕ್ಯುಲಸ್ ಆ್ಯಪ್ನ್ನು ನೀಡಿದ್ದ ಗಿರಿ, ದಯಾನಂದ್, ಹರಿ ಎಂಬುವವರಿಗೆ ಸಂದಾಯ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿ, ದಯಾನಂದ, ಹರಿ ಹಾಗೂ ರಾಕಿ ಎಂಬುವವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.