ತುಮಕೂರು: ಎಸ್ ಬಿ ಎಂ ಬ್ಯಾಂಕ್ ಮ್ಯಾನೇಜರ್ ಹತ್ಯೆ ಮಾಡಲು ಸಂಚು ರೂಪಿಸಿ ನಂತರ ಅವರ ಪತ್ನಿಯನ್ನು ಕೊಲೆಗೈದ ವ್ಯಕ್ತಿಗೆ ತುಮಕೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗೂಳೂರಿನ ಲಿಂಗರಾಜು ಶಿಕ್ಷೆಗೊಳಗಾಗಿರುವ ಅಪರಾಧಿ. 2013ರ ಆಗಸ್ಟ್ 8ರಂದು ತುಮಕೂರು ನಗರದ ಗಾಂಧಿನಗರದ ಬಳಿ ಇರುವ ಎಸ್ ಬಿ ಎಂ ಬ್ಯಾಂಕ್ ಮ್ಯಾನೇಜರ್ ಸೂರ್ಯನಾರಾಯಣ ಬುದೀರ್ ಅವರ ಮನೆಯಲ್ಲಿ ಈ ಕೊಲೆ ನಡೆದಿತ್ತು. ಬುದೀರ್ ಪತ್ನಿ ನಿರ್ಮಲಾ ಅವರನ್ನು ಕೊಲೆ ಮಾಡಿದ್ದ ಲಿಂಗರಾಜು ಮನೆಗೆಲಸದಾಕೆ ಜಯಮ್ಮ ಮೇಲೂ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಇದಕ್ಕೆ ಸಂಬಂಧಪಟ್ಟಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ ಎಸ್ ದೇಶಪಾಂಡೆಯವರು ಆರೋಪ ಸಾಬೀತಾದ ಹಿನ್ನೆಲೆ ಲಿಂಗರಾಜುಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನೆಲೆ:
ಆರೋಪಿ ಲಿಂಗರಾಜು ತನ್ನ ಪತ್ನಿಯ ಹೆಸರಿನಲ್ಲಿದ್ದ ಬ್ಯಾಂಕ್ ಅಕೌಂಟ್ನಲ್ಲಿರುವ ಹಣವನ್ನು ತನಗೆ ಕೊಡಬೇಕೆಂದು ಬ್ಯಾಂಕ್ ವ್ಯವಸ್ಥಾಪಕ ಸೂರ್ಯನಾರಾಯಣ ಬುದೀರ್ ಬಳಿ ಕೇಳಿದ್ದ. ಹಣ ಇರಿಸಿರುವ ಬಗ್ಗೆ ದಾಖಲಾತಿಗಳನ್ನು ತೆಗೆದುಕೊಂಡು ಬರುವಂತೆ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಮ್ಯಾನೇಜರ್ನನ್ನು ಕೊಲೆ ಮಾಡುವ ಉದ್ದೇಶದಿಂದ 2013ರ ಆಗಸ್ಟ್ 8ರಂದು ಅವರ ಮನೆ ಬಳಿ ಕಾದು ಕುಳಿತಿದ್ದ. ಮ್ಯಾನೇಜರ್ ಮನೆಯಲ್ಲಿ ಇದ್ದಾರೆ ಎಂದು ಒಳನುಗ್ಗಿದ್ದ ಆರೋಪಿ ಲಿಂಗರಾಜು, ಮ್ಯಾನೇಜರ್ ಪತ್ನಿ ನಿರ್ಮಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದ.