ತುಮಕೂರು: ಕಾಲ ಎಷ್ಟೇ ಮುಂದುವರೆದರೂ ಕೆಲವು ಮೂಢ ಆಚರಣೆಗಳು ಇನ್ನೂ ನಿಂತಿಲ್ಲ. ಮಹಿಳೆಯರು ಮುಟ್ಟಾದಾಗ ಅಥವಾ ಹೆರಿಗೆಯಾದ ಸಂದರ್ಭಗಳಲ್ಲಿ ಅವರನ್ನು ಸೂತಕ ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಹೊರಗಿಡುವ ಪದ್ಧತಿ ಇನ್ನೂ ಕೊನೆಗೊಂಡಿಲ್ಲ. ಆ ಕಾರಣಕ್ಕಾಗಿ ಗೊಲ್ಲರಹಟ್ಟಿಯಲ್ಲಿ ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ಇಂದಿಗೂ ಮುಂದುವರೆದಿವೆ.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಜುಂಜಪ್ಪನಹಟ್ಟಿಗೆ ಇಂದು ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಭೇಟಿ ನೀಡಿ ಜನರಲ್ಲಿ ಸೂತಕ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸಿದರು. ಮಹಿಳೆಯರನ್ನು ಹೊರಗಡೆ ಇರಿಸುವ ಕೃಷ್ಣ ಕುಟೀರಕ್ಕೆ ಬೀಗ ಹಾಕಿಸಿ, ಮನೆಯಲ್ಲಿಯೇ ಆರೈಕೆ ಮಾಡುವಂತೆ ಮನವಿ ಮಾಡಿದರು.
ಗೊಲ್ಲರಹಟ್ಟಿಗಳಲ್ಲಿ ಸೂತಕದ ಸಂದರ್ಭದಲ್ಲಿ ಮಹಿಳೆಯರನ್ನು ಈ ಕೃಷ್ಣ ಕುಟೀರದಲ್ಲಿಡಲಾಗುತ್ತಿದೆ. ಕುಟೀರಗಳಿಲ್ಲದ ಹಟ್ಟಿಗಳಲ್ಲಿ ಗುಡಿಸಲು ನಿರ್ಮಿಸಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಸಂಪ್ರದಾಯದಿಂದ ಅನೇಕ ಪ್ರಾಣ ಹಾನಿಯೂ ಸಂಭವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ, "ಇಲ್ಲಿನ ಜನರ ಸಂಪ್ರದಾಯದಂತೆ ಗೊಲ್ಲರಹಟ್ಟಿಯಲ್ಲಿ ಅನೇಕ ಕೃಷ್ಣ ಕುಟೀರಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಮೌಢ್ಯಾಚರಣೆಯನ್ನು ತೊಡೆದು ಹಾಕುವ ಬದಲು ಮುಂದುವರೆಸಲು ಪ್ರೇರೇಪಿಸುವಂತಿದೆ. ಮೊದಲು ಇಂತಹ ಕೃಷ್ಣ ಕುಟೀರಗಳಿಗೆ ಬೀಗ ಹಾಕಿ ಬಂದ್ ಮಾಡಬೇಕು. ಮಹಿಳೆಯರನ್ನು ತಮ್ಮ ಮನೆಗಳಲ್ಲಿಯೇ ಇರಿಸಿಕೊಂಡು ಅವರ ಆರೋಗ್ಯವನ್ನು ಕಾಪಾಡಬೇಕಿದೆ" ಎಂದು ಹೇಳಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ್, ಕಾರ್ಯದರ್ಶಿ ಸುರೇಶ್, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: ಗೊಲ್ಲರಹಟ್ಟಿಯಲ್ಲಿ ಮರುಕಳಿಸಿದ ಮೌಢ್ಯಾಚರಣೆ... ಊರಿಂದ ಹೊರಗೆ ಗುಡಿಸಲಲ್ಲಿ ಇರಿಸಿದ್ದ ಬಾಣಂತಿ, ಶಿಶು ರಕ್ಷಿಸಿದ ಜಡ್ಜ್!
ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ: ಬಾಣಂತಿಯನ್ನು ಗ್ರಾಮದಿಂದ ಹೊರಗಿಡಲಾಗಿದ್ದು, ನ್ಯಾಯಾಧೀಶರು ಮಧ್ಯಪ್ರವೇಶಿಸಿ ಮೌಢ್ಯಾಚರಣೆಗೆ ತಡೆಯೊಡ್ಡಿದ ಘಟನೆ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇತ್ತೀಚೆಗೆ ನಡೆದಿತ್ತು. ಮಗು ಮತ್ತು ಬಾಣಂತಿಯನ್ನು ಊರಿಂದಾಚೆಗೆ ಇಡಲಾಗಿತ್ತು. ಯಾವುದೇ ಸ್ವಚ್ಛತೆ ಇಲ್ಲದೇ ಅನಾರೋಗ್ಯಕರ ವಾತಾವರಣದಲ್ಲಿ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನು ಇರಿಸಲಾಗಿತ್ತು.
ಈ ವಿಚಾರ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ್ದ ನ್ಯಾಯಾಧೀಶರು ಮಗುವನ್ನು ತಾವೇ ಕೈಗೆತ್ತಿಕೊಂಡು ಮನೆಗೆ ಕರೆತಂದು ಬಿಟ್ಟಿದ್ದರು. ಇಂತಹ ಘಟನೆ ಮತ್ತೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜನರಿಗೆ ಎಚ್ಚರಿಕೆ ಕೂಡ ನೀಡಿದ್ದರು.
ಮೂಢನಂಬಿಕೆಗೆ ಬಲಿಯಾಗಿತ್ತು ಶಿಶು: ಜುಲೈ ತಿಂಗಳಲ್ಲಿ ಇಂತಹದ್ದೇ ಮತ್ತೊಂದು ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿತ್ತು. ಮೂಢನಂಬಿಕೆಯಂತೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಾಣಂತಿ ಹಾಗೂ ಶಿಶುವನ್ನು ಉರಿನ ಹೊರಗಡೆ ಗುಡಿಸಲಿನಲ್ಲಿ ಇರಿಸಲಾಗಿತ್ತು. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿನಂತೆ ಸೂತಕ ಎಂದು ಬಾಣಂತಿ ಮತ್ತು ಮಗುವನ್ನು ಕುಟುಂಬವೊಂದು ಊರ ಹೊರಗಡೆ ಗುಡಿಸಲಿನಲ್ಲಿ ಇರಿಸಿತ್ತು. ಗುಡಿಸಿಲಿನಲ್ಲಿದ್ದಾಗ ವಿಪರೀತ ಶೀತದಿಂದ ಅನಾರೋಗ್ಯಗೊಂಡಿದ್ದ ವಸಂತ ಎಂಬವರ ಹೆಣ್ಣು ಮಗು ಸಾವಿಗೀಡಾಗಿತ್ತು.
ಇದನ್ನೂ ಓದಿ: ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗಿದ್ದ ಮಗು ಸಾವು; ಮೂಢನಂಬಿಕೆಗೆ ಕಂದಮ್ಮ ಬಲಿ!