ತುಮಕೂರು : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಮಹಿಳೆಯರು ಹಾಗೂ ಪುರುಷರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೇವಲ 270 ದಿನಗಳ ಅವಧಿಯಲ್ಲಿ 168 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 168 ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ಇದರಲ್ಲಿ 122 ಪುರುಷರು ಹಾಗೂ 46 ಮಹಿಳೆಯರಿದ್ದಾರೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 127 ಆಗಿದೆ. ಅದೇ ರೀತಿ ಮಾನಸಿಕ ಖಿನ್ನತೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು 29 ಮಂದಿ. ಉಳಿದಂತೆ 17 ಮಂದಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸಂಸಾರದಲ್ಲಿನ ಜಿಗುಪ್ಸೆ ಮತ್ತು ಅತಿಯಾದ ಮದ್ಯಪಾನದಿಂದ 15 ಮಂದಿ, ಮಾನಸಿಕ ಖಿನ್ನತೆ 48 ಮಂದಿ, ಹೊಟ್ಟೆನೋವಿನ ಬಾಧೆ 16, ಸಾಲ ಬಾಧೆಯಿಂದ 12, ಕೋವಿಡ್ ಸೋಂಕಿನ ಜಿಗುಪ್ಸೆಯಿಂದ 4, ಪ್ರೀತಿ ವೈಫಲ್ಯದಿಂದ 4, ಉದ್ಯೋಗ ಸಿಗದೆ ಮತ್ತು ಬುದ್ಧಿವಾದ ಹೇಳಿದ್ದಕ್ಕೆ ತಲಾ ಒಬ್ಬರು ನೇಣಿಗೆ ಶರಣಾಗಿದ್ದಾರೆ.
ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಅನೇಕ ಕಾರಣಗಳಿಂದ ಏರಿಕೆಯಾಗುತ್ತಿದೆ. ಈ ರೀತಿ ತಕ್ಷಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕೂಡ ಅಂತಹವರು ಬೆಳಕಿಗೆ ಬಂದ ತಕ್ಷಣ ಕೌನ್ಸೆಲಿಂಗ್ ನಡೆಸಲು ಸದ್ದಿಲ್ಲದೆ ಪ್ರಯತ್ನದಲ್ಲಿ ತೊಡಗಿದೆ.