ತುಮಕೂರು: ಮಹಾರಾಷ್ಟ್ರದಲ್ಲಿ ರೈತರಿಗೆ ಭಾರಿ ನಷ್ಟವನ್ನುಂಟು ಮಾಡಿರುವ ಮಿಡತೆಗಳು ಇದೀಗ ಕರ್ನಾಟಕಕ್ಕೂ ದಾಳಿ ನಡೆಸಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕಾಣಿಸಿಕೊಂಡಿವೆ.
ಮಧುಗಿರಿ ತಾಲೂಕಿನಲ್ಲಿ ಅಪಾಯಕಾರಿ ಮಿಡತೆಗಳ ಗುಂಪು ಕಾಣಿಸಿಕೊಂಡಿದ್ದು, ರೈತರಲ್ಲಿ ಭೀತಿ ಮೂಡಿಸಿದೆ. ಮಧುಗಿರಿ ತಾಲೂಕಿನ ಗೌರಿಬಿದನೂರು ರಸ್ತೆಯಲ್ಲಿರುವ ಕೆಎಸ್ಐಐಡಿಸಿ ಗೋದಾಮಿನ ಮುಂಭಾಗದ ಎಕ್ಕದ ಗಿಡದ ಮೇಲೆ ಕುಳಿತು ನಿಮಿಷದಲ್ಲಿ ಎಲ್ಲಾ ಎಲೆಗಳನ್ನು ತಿಂದು ಹಾಕಿವೆ.
ಈ ರೀತಿ ಗುಂಪು ಗುಂಪಾಗಿ ಕಾಣಿಸಿಕೊಂಡಿರುವ ಮಿಡತೆಗಳು ಎಕ್ಕದ ಗಿಡದ ಎಲೆಗಳನ್ನು ತಿಂದು ಬರಿದು ಮಾಡಿ ನಂತರ ಕಣ್ಣಿಗೆ ಕಾಣದಂತೆ ಹಾರಿ ಹೋಗಿವೆ.
ಕ್ಯಾಲೋಟ್ರೊಪಿಸ್ ಮಿಡತೆಗಳು: ಆತಂಕ ಪಡುವ ಅಗತ್ಯವಿಲ್ಲ
ಮಿಡತೆಗಳ ಕುರಿತು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ಐಸಿಎಆರ್ಎನ್ಬಿಐಆರ್ನ ಪ್ರಧಾನ ವಿಜ್ಞಾನಿಯಾಗಿರುವ ಡಾ ಮೋಹನ್, ಹಿರೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ. ಲೋಗೋನಂದನ್ ಮತ್ತು ಕೃಷಿ ಇಲಾಖೆ ಮಧುಗಿರಿ ಉಪನಿರ್ದೇಶಕ ಟಿ ಆರ್ ಅಶೋಕ್ ಸಂಪೂರ್ಣ ಮಾಹಿತಿ ಪಡೆದಿದ್ದು ಪರಿಶೀಲನೆ ನಡೆಸಿದ್ದಾರೆ.
ಈ ಮಿಡತೆಗಳನ್ನು ಕ್ಯಾಲೋಟ್ರೊಪಿಸ್ ಗ್ರಾಸ್ ಹಾಫರ್ ಎಂದು ಗುರುತಿಸಲಾಗಿದ್ದು, ಇವುಗಳು ಸಾಮಾನ್ಯವಾಗಿ ಎಕ್ಕದ ಗಿಡದ ಮೇಲೆ ಕಂಡುಬರುತ್ತವೆ. ಪ್ರತಿ ಮಳೆಗಾಲದ ಆರಂಭದಲ್ಲಿ ಸಂತಾನೋತ್ಪತ್ತಿಗಾಗಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಶೇಕಡಾ 90 ರಷ್ಟು ಭಾಗ ಎಕ್ಕದ ಗಿಡದ ಮೇಲೆ ದಾಳಿ ಮಾಡುವಂತಹ ಮಿಡತೆಗಳಾಗಿವೆ. ಬೆಳೆಗಳ ಮೇಲೆ ದಾಳಿ ಮಾಡುವುದು ತೀರಾ ಕಡಿಮೆಯಾಗಿರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು 'ಈ ಟಿವಿ ಭಾರತ್' ಕ್ಕೆ ತಿಳಿಸಿದ್ದಾರೆ.