ತುಮಕೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಯಾರೂ ಕೂಡ ಆಟ ಆಡಿಸಲು ಆಗುವುದಿಲ್ಲ. ಬಿಎಸ್ವೈ ಅವರೇ ಎಲ್ಲರನ್ನು ಆಟ ಆಡಿಸುತ್ತಾರೆ. ಅವರು ಒಬ್ಬ ಸಾಮರ್ಥ್ಯ ಇರುವ ರಾಜಕಾರಣಿ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಹೊಗಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿ, ಬಿಜೆಪಿ ಪಕ್ಷವು ಯೋಚನೆ ಮಾಡಿ ನಿರ್ಣಯವನ್ನು ತೆಗೆದುಕೊಂಡಿದೆ. ದೆಹಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಪಕ್ಷವು ಆದ್ಯತೆ ಮೇರೆಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಯಡಿಯೂರಪ್ಪ ಒಬ್ಬ ಪಳಗಿದ ರಾಜಕಾರಣಿಯಾಗಿದ್ದಾರೆ. ಹಾಗಾಗಿ, ಯಾರೂ ಅವರನ್ನು ಆಡಿಸುವುದಿಲ್ಲ ಎಂಬ ಒಂದು ಮಾತನ್ನು ಹೇಳಿದ್ದೇನೆ. ಇದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಬಂದೂಕಿಗೆ ಜಾಗವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾಲೆಟ್ಗೆ ಅವಕಾಶವಿದೆ, ಬುಲೆಟ್ಗೆ ಇಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಬಿಜೆಪಿ ಪಕ್ಷವು ಒಪ್ಪುವುದಿಲ್ಲ ಮತ್ತು ಬೆಂಬಲಿಸುವುದಿಲ್ಲ. ನವದೆಹಲಿಯಲ್ಲಿ ಪ್ರತಿಭಟನೆ ನಿರತರ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ಯಾರೇ ಇರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದರ ಹಿಂದೆ ನಾಟಕೀಯ ಬೆಳವಣಿಗೆಗಳು ನಡೆದಿವೆಯೇ ಎಂಬುದು ಕೂಡ ಬಹಿರಂಗವಾಗಬೇಕು ಎಂದರು.