ತುಮಕೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕಿನ ರಾಜೇಂದ್ರಪುರ ಗ್ರಾಮದಲ್ಲಿ ನಡೆದಿದೆ. ಹತ್ತು ವರ್ಷದ ಬಾಲಕ ಚಂದು ಚಿರತೆ ದಾಳಿಗೊಳಗಾಗಿದ್ದಾನೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ರಾಜೇಂದ್ರಪುರ ಗ್ರಾಮದ ಮುನಿರಾಜು ಎಂಬುವರ ಮಗ ಚಂದು, ಗ್ರಾಮದ ಪಕ್ಕದ ಕಟ್ಟೆಯ ಬಳಿ ಆಟವಾಡುತ್ತಿದ್ದನು. ಮಗುವಿನ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕತ್ತಿನ ಬಳಿ ಬಾಯಿ ಹಾಕಿ ರಕ್ತ ಹೀರಿದೆ. ತಕ್ಷಣ ಪಕ್ಕದಲ್ಲೇ ಇದ್ದ ಗ್ರಾಮಸ್ಥರು ಕಿರುಚಾಡಿದ ಮೇಲೆ ಚಿರತೆ ಮಗುವನ್ನು ಬಿಟ್ಟು ಪರಾರಿಯಾಗಿದೆ. ಅಷ್ಟರೊಳಗೆ ಬಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
![Cheeta Attack on child in tumkur](https://etvbharatimages.akamaized.net/etvbharat/prod-images/7986801_s.jpg)
ಘಟನೆಯಿಂದ ರಾಜೇಂದ್ರಪುರ ಗ್ರಾಮಸ್ಥರು ಭಯಭೀತರಾಗಿದ್ದು ಚಿರತೆ ಸೆರೆ ಹಿಡಿಯಲು ಬೋನನ್ನು ಇಡುವ ವ್ಯವಸ್ಥೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ತಾಲೂಕಿನಾದ್ಯಂತ ಚಿರತೆಯ ಕಾಟ ಜಾಸ್ತಿಯಾಗಿದ್ದು, ಮಗು ಕಳೆದುಕೊಂಡ ಕುಟುಂಬಕ್ಕೆ ಹತ್ತು ಲಕ್ಷ ರೂ. ಗಳ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.