ತುಮಕೂರು: ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗುತ್ತಿದ್ದ ಸಹೋದರನನ್ನು 8 ವರ್ಷದ ಬಾಲಕಿ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ನಡೆದಿದೆ. ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದ ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿಯ 7 ವರ್ಷದ ಪುತ್ರ ಹಿಮಾಂಶೂ ಬಾವಿಗೆ ಬಿದ್ದಿದ್ದ. ಈತನನ್ನು ಅಕ್ಕ ಶಾಲೂ ರಕ್ಷಣೆ ಮಾಡಿದ್ದಾಳೆ.
ಜೀತೇಂದ್ರ - ರಾಜಕುಮಾರಿ ದಂಪತಿಗೆ ನಾಲ್ವರು ಮಕ್ಕಳು. ಶಾಲೂ (8), ಹಿಮಾಂಶೂ (7), ರಾಶಿ (3), ಕಪಿಲ್ (2) ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾಲ್ ತೆಗೆಯಲು ಹೋದ ಹಿಮಾಂಶೂ ಮಗುಚಿ ಬಾವಿಗೆ ಬಿದ್ದಿದ್ದಾನೆ. ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ತಮ್ಮನನ್ನು ಕಂಡ ಶಾಲೂ ಕೂಡಲ್ಲೇ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಇದೇ ವೇಳೆ ಅಕ್ಕ ಪಕ್ಕದ ಜನರು ಸಹ ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಇದರಿಂದಾಗಿ ಬಾಲಕಿಯ ತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಹೀಗಾಗಿ, ಲೈಫ್ ಜಾಕೆಟ್ ಧರಿಸಿ ಈಜುವುದನ್ನು ಕಲಿತ್ತಿದ್ದಳು. ಬಾಲಕಿಯ ಸಾಹಸವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಬೀದಿನಾಯಿ ರಕ್ಷಿಸಿದ ಯುವಕ- ವಿಡಿಯೋ
ಕೇರಳ ಘಟನೆ: ಇನ್ನು ತಿರುವನಂತಪುರಂನ ವಿಝಿಂಜಂನಲ್ಲಿ 90 ಅಡಿ ಆಳದ ಬಾವಿಯೊಳಗೆ ವಲಸೆ ಕಾರ್ಮಿಕ ಸಿಲುಕಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಜುಲೈ 10 ರಂದು ಕಾರ್ಮಿಕನ ಮೃತದೇಹವನ್ನು ಹೊರ ತೆಗೆಯಲಾಗಿತ್ತು. ಸುಮಾರು 48 ಗಂಟೆಗಳ ಕಾಲ ಬಾವಿಯೊಳಗೆ ಸಿಲುಕಿದ್ದ ತಮಿಳುನಾಡು ಮೂಲದ ಕಾರ್ಮಿಕ ಮಹಾರಾಜನ್ (55) ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾವಿಯಿಂದ ಮೃತದೇಹ ಹೊರ ತೆಗೆದಿದ್ದರು. 30 ವರ್ಷಗಳಷ್ಟು ಹಳೆಯದಾದ ಬಾವಿಯಲ್ಲಿನ ರಿಂಗ್ಗಳನ್ನು ಬದಲಾಯಿಸುವಾಗ ದುರಂತ ಸಂಭವಿಸಿತ್ತು.
ಬಾವಿಗೆ ಬಿದ್ದ ನಾಯಿ ರಕ್ಷಣೆ: ಬಾವಿಗೆ ಬಿದ್ದ ಬೀದಿನಾಯಿಯನ್ನು ಯುವಕನೋರ್ವ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ಜೂನ್ 29 ರಂದು ನಡೆದಿತ್ತು. ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ನಾಯಿಯನ್ನು ಕಂಡ ನಾಗೇಂದ್ರ ಎಂಬವರು ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದರು.
ಇದನ್ನೂ ಓದಿ : 90 ಅಡಿ ಆಳದ ಬಾವಿಯೊಳಗೆ ಸಿಲುಕಿದ್ದ ಕಾರ್ಮಿಕ: 48 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ