ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಾಳೆ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರು ಸೇರಿ ಪಾಲಿಕೆಯ ಇತರೆ ಕಾರ್ಮಿಕರಿಗೆ ಬೆಳ್ಳಿ ದೀಪ ನೀಡಲಾಗುವುದು ಎಂದು ಮೇಯರ್ ಸುವರ್ಣ ಶಂಕರ್ ತಿಳಿಸಿದ್ದಾರೆ.
ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರನ್ನು ಮಹಾತ್ಮ ಗಾಂಧಿ ಹರಿ ಅಂದ್ರೇ ದೇವರಿಗೆ ಹೋಲಿಸಿದ್ದಾರೆ. ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರ ಶ್ರಮ ಅತಿ ಹೆಚ್ಚಾಗಿದೆ. ಇದರಿಂದ ಪೌರ ಕಾರ್ಮಿಕರನ್ನು ಗುರುತಿಸುವುದು ಹಾಗೂ ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ನಾಳೆ ಅಂಬೇಡ್ಕರ್ ಭವನದಲ್ಲಿ ನಡೆಯುವ ಪೌರ ಕಾರ್ಮಿಕರ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತದೆ. ಕಳೆದ ವರ್ಷ ನಗರದಲ್ಲಿ ನೆರೆ ಇದ್ದ ಕಾರಣ ಪೌರ ಕಾರ್ಮಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಕೋವಿಡ್ನಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತದೆ. ಕಾರ್ಯಕ್ರಮದ ಹಣದಲ್ಲಿ ಪೌರ ಕಾರ್ಮಿಕರಿಗೆ ಒಂದು ಜೊತೆ ಬೆಳ್ಳಿ ದೀಪ ನೀಡಲಾಗುತ್ತದೆ. ಈ ಮೂಲಕ ನಗರ ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಮನೆ ಬೆಳಗಲಿ ಎಂದು ಬೆಳ್ಳಿ ದೀಪ ನೀಡಲಾಗುತ್ತಿದೆ ಇದು ರಾಜ್ಯದಲ್ಲಿಯೇ ಪ್ರಥಮ ಎಂದರು.
ನಂತರ ಮಾತನಾಡಿದ ಪಾಲಿಕೆಯ ಆಯುಕ್ತ ಚಿದಾನಂದ ವಾಟರೆ ಅವರು, ಪಾಲಿಕೆಯಲ್ಲಿ 409 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ 175 ಖಾಯಂ ಪೌರ ಕಾರ್ಮಿಕರು, 231 ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರು, 3 ಜನ ದಿನಗೂಲಿ ಕಾರ್ಮಿಕರಿದ್ದಾರೆ. ಇವರ ಜೊತೆಗೆ ಡ್ರೈವರ್ಸ್ ಸೇರಿ ನಾಳೆ ಒಟ್ಟು 717 ಪಾಲಿಕೆ ನೌಕರರಿಗೆ ಬೆಳ್ಳಿ ದೀಪ ನೀಡಲಾಗುತ್ತದೆ ಎಂದರು. ಅದೇ ರೀತಿ ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಪಾಲಿಕೆಯ ಪೌರ ಕಾರ್ಮಿಕರಿಗೆ ಕಲ್ಯಾಣ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯಲಿದೆ ಎಂದರು. ಈ ವೇಳೆ ಪಾಲಿಕೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಹಾಜರಿದ್ದರು.