ಶಿವಮೊಗ್ಗ: ಶರಾವತಿ ಸಂತ್ರಸ್ತರ ಪರ ಬಿಜೆಪಿ ಸರ್ಕಾರ ಮೊಸಳೆ ಕಣ್ಣೀರು ಹಾಕ್ತಾ ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿದ್ದ ಶರಾವತಿ ಸಂತ್ರಸ್ತರ ಪರ ಜನಾಕ್ರೋಶ ಪಾದಯಾತ್ರೆ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿ, ಮಾತನಾಡಿದ ಅವರು, ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪಾದಯಾತ್ರೆ ನಡೆಸಲಾಗಿದೆ. ಈಗ ಡಬಲ್ ಇಂಜಿನ್ ಸರ್ಕಾರ ಇದೆ. ಅವರು ಈಗ ಹಕ್ಕು ಪತ್ರ ನೀಡಲಿ ಎಂದು ಆಗ್ರಹಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ನಿರಾಶ್ರಿತರಿಗಾಗಿ ಡಿನೋಟಿಫಿಕೇಷನ್ ಮಾಡಿ ಹಕ್ಕು ಪತ್ರ ನೀಡಲಾಗಿತ್ತು. ಆದರೆ ಯಾರೋ ಒಬ್ಬರು ಕೋರ್ಟ್ಗೆ ಹೋಗಿದ್ದಾರೆ ಎಂದು ಹೇಳಿ ಡಿನೋಟಿಫಿಕೇಷನ್ ರದ್ದು ಮಾಡಿದ್ದು ಬಿಜೆಪಿ ಸರ್ಕಾರ. ಇದರಿಂದ ಅವರೇ ಈಗ ಹಕ್ಕುಪತ್ರವನ್ನು ನೀಡಬೇಕೆಂದು ಆಗ್ರಹಿಸಿದರು.
ಲಿಂಗನಮಕ್ಕಿ ಜಲಾಶಯಕ್ಕಾಗಿ ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ನಾಡಿಗೆ ಬೆಳಕು ನೀಡಬೇಕೆಂದು ತಮ್ಮ ನೆಲೆಯನ್ನು ಕಳೆದುಕೊಂಡವರಿಗೆ ಇದುವರೆಗೂ ಹಕ್ಕು ಪತ್ರ ನೀಡದೆ ಇರುವುದು ದುರದೃಷ್ಟಕರ. ಈ ಹಿಂದೆ ನಮ್ಮ ಸರ್ಕಾರ ರಾಜ್ಯ ಸರ್ಕಾರದ ಅನುಮತಿ ಸಾಕು ಎಂದು ಕಾನೂನು ಸಲಹೆಗಾರರು ಹೇಳಿದ್ದ ಮೇರೆಗೆ ಡಿನೋಟಿಫಿಕೇಷನ್ ನೀಡಲಾಗಿತ್ತು. ಆದರೆ ನಂತರ ಕೇಂದ್ರದ ಅನುಮತಿ ಬೇಕು ಎಂದು ಹೇಳಿದ್ದರಿಂದ ಅದು ರದ್ದಾಗಿದೆ.
ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವರು ಈಗ ಹಕ್ಕುಪತ್ರ ನೀಡಲಿ ಎಂದ ಸಿದ್ದರಾಮಯ್ಯ ಈಗ ನಾನು ಹೋರಾಟಗಾರರ ಪರವಾಗಿ ಸಮಾವೇಶದಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು.
ಇದನ್ನೂ ಓದಿ: ಚುನಾವಣೆ ವೇಳೆ ಮುನ್ನೆಲೆಗೆ ಬಂದ ಶರಾವತಿ ಸಂತ್ರಸ್ತರ ಬವಣೆ: ಬಿಜೆಪಿ-ಕಾಂಗ್ರೆಸ್ ಜಟಾಪಟಿ