ಶಿವಮೊಗ್ಗ : ಶಿಕಾರಿಪುರದ 85 ವರ್ಷದ ವೃದ್ಧರೊಬ್ಬರು ಮೆಗ್ಗಾನ್ ಕೋವಿಡ್ ಆಸ್ಪತ್ರೆಯಿಂದ ನಾಪತ್ತೆಯಾದ ಬಗ್ಗೆ ಪೊಲೀಸ್ ತನಿಖೆ ಪ್ರಾರಂಭವಾಗಿದೆ. ಪೊಲೀಸರ ವರದಿ ಬಂದ ನಂತರ ಪ್ರತಿಕ್ರಿಯಿಸುವುದಾಗಿ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಿಂದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸಿ ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ನಾಪತ್ತೆ ಪ್ರಕರಣ ತನಿಖೆಯಲ್ಲಿರುವುದರಿಂದ ನಾನು ಈಗ ಪ್ರತಿಕ್ರಿಯೆ ನೀಡುವುದು ಸರಿಯಾಗುವುದಿಲ್ಲ ಎಂದರು. ಜಿಲ್ಲೆಯ ಕೋವಿಡ್ ಸಂಬಂಧಪಟ್ಟಂತೆ ಯಾವುದೇ ರೀತಿಯ ಮಾಹಿತಿಯನ್ನು ಜಿಲ್ಲಾಧಿಕಾರಿಯಾಗಿ ನಾನು ನೀಡಿದ ಮೇಲೆಯೇ ಅಂತಿಮ ಎಂದರು.
ಯಾವುದೇ ಅವ್ಯವಹಾರ ನಡೆದಿಲ್ಲ : ಎಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬರುತ್ತದೆಯೇ ಅಲ್ಲಿ ಕಂಟೇನ್ಮೆಂಟ್ ಝೋನ್ ಮಾಡಲಾಗುತ್ತದೆ. ಯಾವ ರೀತಿ ಕಂಟೇನ್ಮೆಂಟ್ ಝೋನ್ ಮಾಡಬೇಕು ಎಂದು ಸ್ಥಳೀಯವಾಗಿ ಅಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸೀಲ್ಡೌನ್ ಮಾಡಿದ ಕಡೆ ಬ್ಯಾರಿಕೇಡ್ ಹಾಕಲಾಗುತ್ತದೆ ಎಂದರು.
ನಂತರ ಆಶಾ ಕಾರ್ಯಕರ್ತೆಯರು ಹಾಗೂ ಕಮಾಂಡರ್ನ ನೇಮಕ ಮಾಡಲಾಗುವುದು. ಅಲ್ಲಿ ಮೆಡಿಕಲ್ ಸಲಕರಣೆ ಹಾಗೂ ಬ್ಯಾರಿಕೇಡ್ ಬೇಕಾಗುತ್ತದೆ. ಇವರೆಡು ಬಿಟ್ಟು ಅಲ್ಲಿ ಯಾವುದೇ ಖರ್ಚು ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ತುಂಬ ನಿರ್ಗತಿಕರು ಇದ್ದರೆ ಅವರಿಗೆ ದಿನಸಿ ಕಿಟ್ ವಿತರಿಸಲಾಗುವುದು ಎಂದರು.