ಶಿವಮೊಗ್ಗ: ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರ ವಾದ ಮಂಡಿಸಿದ್ದರೆ ಶರಾವತಿ ಸಂತ್ರಸ್ತರು ಇಂದು ಬೀದಿಯಲ್ಲಿ ನಿಲ್ಲುತ್ತಿರಲಿಲ್ಲ ಎಂದು ಜೆಡಿಎಸ್ ನ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಇಂದು ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಗೋಡು ತಿಮ್ಮಪ್ಪನವರ ನೀಡಿದ ಹಕ್ಕು ಪತ್ರದ ವಿರುದ್ದ ಗಿರೀಶ್ ಎಂಬುವರು ಕೋರ್ಟ್ ಹೋಗಿದ್ದರು. ಈ ವೇಳೆ, ರಾಜ್ಯ ಸರ್ಕಾರ ನಿರಾಶ್ರಿತರ ಪರ ಸರಿಯಾಗಿ ವಾದ ಮಂಡಿಸಲಿಲ್ಲ. ಭೂಮಿ ನೀಡಲು ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಕೋರ್ಟ್ ಆದೇಶ ರದ್ದು ಮಾಡಿದಾಗ, ನಾಡಿಗೆ ಬೆಳಗು ನೀಡಲು ನಿರಾಶ್ರಿತರಾದವರಿಗೆ ಮಾನವೀಯ ನೆಲೆಯಲ್ಲಿ ಭೂಮಿ ನೀಡಲು ಒಂದು ಅವಕಾಶ ಕೇಳಬಹುದಾಗಿತ್ತು.
ಇಲ್ಲ ಇದಕ್ಕಾಗಿ ಕೋರ್ಟ್ ನೇತೃತ್ವದಲ್ಲಿಯೇ ಒಂದು ಸಮಿತಿ ರಚನೆ ಮಾಡಲು ವಿನಂತಿಸಿಕೊಳ್ಳಬಹುದಾಗಿತ್ತು. ಆದರೆ, ಅದನ್ನು ಮಾಡದೇ ರಾಜ್ಯ ಸರ್ಕಾರ ಕೈ ಕಟ್ಟಿ ಕುಳಿತುಕೊಂಡ ಪರಿಣಾಮ ಇಂದು ಈ ಭಾಗದ ಜನ ಮತ್ತೆ ಅತಂತ್ರರಾಗಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ, ಈಗ ಸರ್ಕಾರ ಮತ್ತೆ ವರದಿ ತರಿಸಿಕೊಂಡು ಕೇಂದ್ರದ ಒಪ್ಪಿಗೆಗೆ ಕಳುಹಿಸುತ್ತೆವೆ ಎಂದಿರುವುದು ಜನರನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದಂತೆ ಆಗಿದೆ. ಅದಷ್ಟು ಬೇಗ ರಾಜ್ಯ ಸರ್ಕಾರ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಶಾರದಾ ಪೂರ್ಯಾನಾಯ್ಕ ಆಗ್ರಹಿಸಿದರು.
ಇದನ್ನೂ ಓದಿ:ಸಂವಿಧಾನಬದ್ಧ ಆಡಳಿತ ನಡೆಸುವುದು ನಮ್ಮ ಆಶಯ: ಸಿಎಂ ಬೊಮ್ಮಾಯಿ