ಶಿವಮೊಗ್ಗ: ನಗರದದ ಹೃದಯಭಾಗದಲ್ಲಿ ಇರುವ ಮಹಾತ್ಮ ಗಾಂಧಿ ಪಾರ್ಕ್ ನಲ್ಲಿ ಇಂದು ಸ್ವಚ್ಛ ಭಾರತ ಅಭಿಯಾನದಡಿ ಬಿಜೆಪಿಯ ಮಹಾನಗರ ಪಾಲಿಕೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
ಗಾಂಧಿ ಪಾರ್ಕ್ ನಲ್ಲಿ ಸ್ವಚ್ಛತೆ ಇಲ್ಲದೆ ಸಾಕಷ್ಟು ಕಸ ತುಂಬಿಕೊಂಡಿತ್ತು. ಪಾರ್ಕ್ ನಿರ್ವಹಣೆಗಾಗಿಯೇ ಗುತ್ತಿಗೆ ನೀಡಲಾಗಿತ್ತಾದರೂ, ಗುತ್ತಿಗೆದಾರನ ಗುತ್ತಿಗೆ ಅವಧಿ ಮುಗಿದಿದ್ದು, ಕೊರೊನಾದಿಂದ ಹೊಸ ಗುತ್ತಿಗೆಯ ಟೆಂಡರ್ ಕರೆದಿರಲಿಲ್ಲ. ಇದರಿಂದ ಪಾರ್ಕ್ನಲ್ಲಿ ಸ್ವಚ್ಛತೆ ಮಾಡುವವರು ಯಾರೂ ಇರಲಿಲ್ಲ. ಮಳೆಯಿಂದಾಗಿ ಸಾಕಷ್ಟು ಗಿಡ- ಗಂಟಿಗಳು ಕೂಡ ಬೆಳೆದಿದ್ದವು.
ಇಂದು ಬೆಳ್ಳಂಬೆಳಗ್ಗೆ ಪಾಲಿಕೆಯ ಸದಸ್ಯರು, ನಗರ ಬಿಜೆಪಿ ಕಾರ್ಯಕರ್ತರು ಪೊರಕೆ ಹಿಡಿದು ಪಾರ್ಕ್ನಲ್ಲಿ ಕಸ ಗುಡಿಸಿದ್ದಾರೆ. ಹೆಚ್ಚಾಗಿ ಮರದ ಎಲೆ, ಗಿಡದ ಕಸ ಎಲ್ಲೆಲ್ಲೂ ತುಂಬಿಕೊಂಡಿತ್ತು. ಪಾಲಿಕೆ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡೇ ಕಸಗೂಡಿಸಿ ಗುಡ್ಡೆ ಹಾಕುತ್ತಿದ್ದರು. ನಂತರ ಗಾಡಿಯಲ್ಲಿ ಕಸವನ್ನು ತುಂಬಿ ಒಂದು ಕಡೆ ರಾಶಿ ಹಾಕಲಾಯಿತು.
ಪೊರಕೆ ಹಿಡಿದ ಮೇಯರ್ : ಪಾಲಿಕೆ ಮೇಯರ್ ಸುವರ್ಣ ಶಂಕರ್ ಅವರು ತಾವೇ ಸ್ವತಃ ಪೊರಕೆ ಹಿಡಿದು ಕಸಗೂಡಿಸಿದರು. ಗಾಂಧಿ ಪುತ್ಥಳಿಯ ಸುತ್ತಮುತ್ತ ಕಸಗೂಡಿಸಿದರು. ಈ ವೇಳೆ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನದಡಿ ಪ್ರತಿವಾರ ಪ್ರತಿ ವಾರ್ಡ್ನಲ್ಲಿ ಸ್ವಚ್ಚತೆ ಮಾಡುತ್ತಿದ್ದೆವೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸ್ವಚ್ಛತೆಯನ್ನು ಮುಂದೂಡಲಾಗಿತ್ತು. ಈ ಭಾನುವಾರದಿಂದ ಮತ್ತೆ ಸ್ವಚ್ಛ ಭಾರತ ಅಭಿಮಾನದ ಕೆಲಸ ಪ್ರಾರಂಭಿಸುತ್ತಿದ್ದೇವೆ. ಪಾರ್ಕ್ ಅಭಿವೃದ್ಧಿಗೆ 3 ಕೋಟಿ ರೂ ತೆಗೆದಿಡಲಾಗಿದೆ ಎಂದು ಅವರು ಹೇಳಿದರು.
ಪಾಲಿಕೆಯ ಸದಸ್ಯರುಗಳಾದ ಚನ್ನಬಸಪ್ಪ, ಪ್ರಭಾಕರ್, ಸುನೀತ ಅಣ್ಣಪ್ಪ, ಬಳ್ಳೆಕೆರೆ ಸಂತೋಷ್, ಹಿರಣ್ಣಯ್ಯ ಸೇರಿ ಇತರರು ಹಾಜರಿದ್ದರು.