ಶಿವಮೊಗ್ಗ : ಚುನಾವಣಾ ಆಯೋಗ ಅಳೆದು ತೂಗಿ ಹೊರತಂದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮೀಸಲಾತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲೇ ವಿರೋಧ ವ್ಯಕ್ತವಾಗಿದೆ. ಈ ಬಾರಿಯ ಮೀಸಲಾತಿಯಲ್ಲಿ ಎಸ್ಸಿ/ಎಸ್ಟಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಎಸ್ಸಿ/ಎಸ್ಟಿ ಸಮಾನ ಮನಸ್ಕರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಸಮಾನ ಮನಸ್ಕರ ಪರವಾಗಿ ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲೂ ಸಹ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ. ಇಲ್ಲಿ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಬರುತ್ತವೆ.
ಕಳೆದ ಬಾರಿ ಎರಡು ಕ್ಷೇತ್ರ ಎಸ್ಸಿಗೆ, 3 ಜನ ಎಸ್ಟಿ ಹಾಗೂ ಹಿಂದುಳಿದ ಕ್ಷೇತ್ರದಲ್ಲಿ 3 ಜನ ಆಯ್ಕೆಯಾಗಿದ್ದರು. ಬೇರೆ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಹಿಂದುಳಿದ ವರ್ಗದವರು ಆಯ್ಕೆಯಾಗಿದ್ದರು. ಆದರೆ, ಈ ಬಾರಿಯ ಮೀಸಲಾತಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಸಹ ಎಸ್ಸಿ/ಎಸ್ಟಿಗೆ ಮೀಸಲಿಡದೆ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಹೊಣೆ : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಒಂದು ಕ್ಷೇತ್ರವನ್ನು ಎಸ್ಸಿ/ಎಸ್ಟಿಗೆ ಬಾರದಂದೆ ಮಾಡಲಾಗಿದೆ. ಇದರ ಹೊಣೆಯನ್ನು ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ ನಾಯ್ಕ ಅವರೇ ಹೊರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಶೋಷಿತರ, ದಮನಿತರ ಧ್ವನಿಯಾಗಿ ಮಾನ್ಯ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಆದರೆ, ಶಾಸಕರೇ ಈ ರೀತಿ ಅನ್ಯಾಯ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಹೋರಾಟ ಮಾಡಲು ಸಿದ್ದರಿದ್ದೇವೆ : ಚುನಾವಣಾ ಆಯೋಗ ಕೇಳಿದ ವರದಿಯಲ್ಲಿ ಕ್ಷೇತ್ರದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡದೆ ಇರುವುದಕ್ಕೆ ಈ ರೀತಿ ಆಗಿದೆ ಎಂದು ಆಕ್ರೋಶ ಹೊರ ಹಾಕಿದ ಅವರು, ಪ್ರಜಾಪ್ರಭುತ್ವದಲ್ಲಿ ನಾವು ಬದುಕುತ್ತಿದ್ದೇವೆ. ಚುನಾವಣಾ ಆಯೋಗ ಸಹ ಅದರ ಕೆಳಗೆ ಕೆಲಸ ಮಾಡುತ್ತಿದೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ನಾವು ನಮ್ಮ ಅಹವಾಲನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ. ಇದರ ಹೊರತಾಗಿ ಕಾನೂನು ಹೋರಾಟ ಮಾಡಲು ಸಹ ನಾವು ಸಿದ್ದರಿದ್ದೇವೆ ಎಂದು ವೀರಭದ್ರಪ್ಪ ಪೂಜಾರಿ ತಿಳಿಸಿದ್ದಾರೆ.
ಮೀಸಲಾತಿ ವಿಚಾರ ನನ್ನ ಗಮನಕ್ಕೆ ಬಾರದಾಗಿದೆ : ಮೀಸಲಾತಿ ವಿಚಾರವಾಗಿ ಸಮಾನಮನಸ್ಕರ ವೇದಿಕೆ ಮಾಡಿದ ಆರೋಪಕ್ಕೆ ಉತ್ತರಿಸಿದ ಶಾಸಕ ಅಶೋಕ ನಾಯ್ಕ ಅವರು, ನಮ್ಮ ಕ್ಷೇತ್ರದ ಜನ ಮೀಸಲಾತಿ ವಿಚಾರದಲ್ಲಿ ಆಕ್ರೋಶಗೊಂಡಿದ್ದಾರೆ. ಇದು ಸಹಜ. ಮೀಸಲಾತಿ ವಿಚಾರ ನನ್ನ ಗಮನಕ್ಕೆ ಬಾರದಾಗಿದೆ. ಅದು ಹೇಗೆ ಮೀಸಲಾತಿ ನೀಡಿದ್ರೋ ನನಗೆ ಗೊತ್ತಿಲ್ಲ. ಅನಿವಾರ್ಯವಾಗಿ ನನ್ನ ಮೇಲೆ ಸಿಟ್ಟು ತೋರಿಸಿದ್ದಾರೆ ಎಂದರು.
ಎಸ್ಸಿ ಮೀಸಲಾತಿ ಕ್ಷೇತ್ರವಾದ ಇಲ್ಲಿ 60 ಸಾವಿರ ಜನ ಎಸ್ಸಿ/ಎಸ್ಟಿ ಇದ್ದಾರೆ. ಇಲ್ಲಿ ನನ್ನನ್ನೂ ಸೇರಿಸಿಕೊಂಡು ಅನ್ಯಾಯವಾಗಿದೆ. ಇದನ್ನು ಯಾರ ಗಮನಕ್ಕೆ ತರಬೇಕೋ ಅದನ್ನು ತಂದಿದ್ದೇನೆ ಎಂದ ಅವರು, ಖಂಡಿತ ನ್ಯಾಯ ಕೊಡಿಸುವ ಭರವಸೆ ನೀಡಿದ್ದೇನೆ. ಇಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನೀಡಲಾಗಿದೆ ಎಂದರು.
ಓದಿ: ಬಸ್ ಆರಂಭವಾದ್ರೂ ಸಂಚಾರಕ್ಕೆ ಮನಸ್ಸು ಮಾಡದ ಪ್ರಯಾಣಿಕ: ಹುಬ್ಳಳ್ಳಿ ಬಸ್ ನಿಲ್ದಾಣಗಳು ಭಣಭಣ