ಮೈಸೂರು : ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಾಡ್ರಳ್ಳಿ ಗ್ರಾಮದ ಶಂಕರ್ ಗುರು ಅವರು ಹೊಸ ಭತ್ತದ ತಳಿಯನ್ನು ಸಂಶೋಧಿಸಿದ್ದಾರೆ. ಇದಕ್ಕೆ ಎನ್ಎಂಎಸ್ -2 ತಳಿ ಎಂದು ಅವರೇ ಹೆಸರನ್ನೂ ಇರಿಸಿದ್ದಾರೆ. ಈ ಹಿನ್ನೆಲೆ ಇವರಿಗೆ ಭಾರತ ಸರ್ಕಾರದಿಂದ ಪೇಟೆಂಟ್ ಹಕ್ಕನ್ನು ನೀಡಲಾಗಿದೆ. ಈ ಮೂಲಕ ಶಂಕರ್ ಗುರು ಅವರು ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.
ವಿಶಿಷ್ಟ ತಳಿ ಅನ್ವೇಷಣೆ : ಶಂಕರ್ ಗುರು ಅವರ ತಂದೆಯವರ ಕಾಲದಿಂದಲೂ ಕೃಷಿಯನ್ನೇ ಅವಲಂಭಿಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ ಇವರು ರೇಷ್ಮೆ ಬೆಳೆಯತ್ತಿದ್ದರಂತೆ. ಆದರೆ, ರೇಷ್ಮೆಯಲ್ಲಿ ಯಶಸ್ಸು ಕಾಣದ ಕಾರಣ ಭತ್ತದ ಬೀಜ ಸಂಗ್ರಹಣೆ ಮಾಡಿ, ಹೊಸ ತಳಿಯನ್ನು ಸೃಷ್ಟಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಈ ಎನ್ಎಂಎಸ್-2 ಭತ್ತದ ತಳಿಯಿಂದ ಪ್ರತಿ ಎಕರೆಗೆ 32 ಕ್ವಿಂಟಾಲ್ ಬತ್ತವನ್ನು ಬೆಳೆಯಬಹುದಾಗಿದೆ. ಆರ್ಗೆನಿಕ್ ಗೊಬ್ಬರವನ್ನು ಅತಿಯಾಗಿ ಬಳಸುವಂತಿಲ್ಲ. ಕೊಟ್ಟಿಗೆ ಗೊಬ್ಬರ ಬಳಸಿದರೆ ಸಾಕು, ರೋಗರುಜಿನಗಳು ಬರುವುದಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ಇದು ಮಧ್ಯಮವರ್ಗದ ರೈತರಿಗೆ ಅತಿ ಹೆಚ್ಚು ಅನುಕೂಲಕರವಾಗಲಿದೆ. ಜೊತೆಗೆ ಊಟಕ್ಕೂ ಸಹ ಯೋಗ್ಯವಾಗಿದೆ ಅಂತಾ ಶಂಕರ್.
ಗ್ರಾಂ ಲೆಕ್ಕದಲ್ಲಿ ಮಾರಾಟ : ಹೊಸ ತಳಿ ಭತ್ತವನ್ನು ಬೆಳೆದಾಗ ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಆದ್ದರಿಂದ ನಾವು ಈ ಬಿತ್ತನೆ ಭತ್ತವನ್ನು ಗ್ರಾಂ ಲೆಕ್ಕದಲ್ಲಿ ನೀಡುತ್ತೇವೆ. ಕ್ವಿಂಟಾಲ್ಗಟ್ಟಲೆ ನೀಡಿದರೆ ಅದನ್ನು ಬೆಳೆದು ಬೆಂಬಲ ಬೆಲೆ ದೊರೆಯದಿದ್ದರೆ ನಮಗೆ ಕಷ್ಟವಾಗುತ್ತದೆ ಅಂತಾರೆ ದೂರದೃಷ್ಟಿಯುಳ್ಳ ಗುರು ಅವರು.
ಇದನ್ನೂ ಓದಿ : ಕಾಂಗ್ರೆಸ್ನದು ಓಲೈಕೆ ರಾಜಕಾರಣ, ಬಿಜೆಪಿ ಅಭಿವೃದ್ಧಿ ಮಾಡಿ ವೋಟ್ ಕೇಳುತ್ತೆ.. ಸಚಿವ ಆರ್ ಅಶೋಕ್
ಹಳೆಯ ಭತ್ತದ ತಳಿಗಳು ನಶಿಸಿ ಹೋಗಬಾರದು, ದೇಶಿಯ ಭತ್ತದ ವಿವಿಧ ಮಾದರಿಯ ತಳಿಗಳಾದ ಕರಿ ಕಣ್ ಎಗ್ಗ,ರತ್ನಚೂಡಿ,ರಾಜಮುಡಿ, ಸಣ್ಣ ಸಿಲಂ,ಕಾಲಾ ಜೀರ,ಮುಲ್ ಚುಂಗ್, ಕಾಗೆ ಸಾಲ,ಚುಂಗಾಳಿ, ಬಾಸುಮತಿ,ನಾರಿ ಕೇಳೆ, ರಾಮ್ಗಲಿ,ಜೀರಾ ಸಣ್ಣ ಹಾಗೂ ಮುಂತಾದ ತಳಿಯ ಭತ್ತಗಳನ್ನು ಶಂಕರ್ ಗುರು ತಮ್ಮ ಮನೆಯಲ್ಲಿ ಸಂಗ್ರಹಿಸಿ ಇಡುವ ಹವ್ಯಾಸ ಹೊಂದಿದ್ದಾರೆ.
ಎನ್ಎಂಎಸ್-2 ತಳಿಯು ಬೆಂಗಳೂರಿಂದ ವಿಸಿ ಫಾರ್ಮ್ ಕ್ಷೇತ್ರದಲ್ಲಿ ಪರೀಕ್ಷೆಗೊಳಪಟ್ಟು ಉತ್ತಮ ತಳಿ ಎಂದು ದೃಢೀಕರಿಸಲಾಗಿದೆ. ಈ ತಳಿಯನ್ನು ತಮಿಳುನಾಡು,ಹರಿಯಾಣ, ಪಂಜಾಬ್,ಆಂಧ್ರಪ್ರದೇಶಗಳಲ್ಲಿಯೂ ಬೆಳೆದು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಈಗ ಆಧುನಿಕತೆಗೆ ಮಾರು ಹೋಗುತ್ತಿದ್ದು, ಕೃಷಿ ಮಾಡಲು ಸಂಪೂರ್ಣ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ತಳಿಗಳು ನಶಿಸುತ್ತಿವೆ. ಇದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ತಳಿಯನ್ನು ರೈತರಿಗೆ ನೀಡಲಾಗುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಬೀಜ ನಿಗಮದ ಭತ್ತದ ತಳಿಗಳ ಬೀಜ ಉತ್ಪಾದಕರಾಗಿರುವ ಶಂಕರ್ ಗುರು ಅವರಿಗೆ ಎನ್ಎಂಎಸ್ -2 ಸ್ಥಳೀಯ ಅಭಿವೃದ್ಧಿಗಾಗಿ ನ್ಯಾಷನಲ್ ಇನ್ನೋವೇಶನ್ ಅವಾರ್ಡ್, ದೇಸಿ ಅಕ್ಕಿ ಮೇಳದಲ್ಲಿ 2011ರಲ್ಲಿ ರೈತ ವಿಜ್ಞಾನಿ ಪ್ರಶಸ್ತಿ ಕೂಡ ಲಭಿಸಿದೆ. ವಂಶ ಪಾರಂಪರ್ಯವಾಗಿ ಬರುವ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ ಬರುವ ಅನುಭವದ ಮುಂದೆ ಏನೇನು ಇಲ್ಲ ಎಂಬುದಕ್ಕೆ ತಾಲೂಕಿನ ಮಾಡ್ರಳ್ಳಿ ಗ್ರಾಮದ ರೈತ ಶಂಕರ್ ಗುರು ಅವರು ಉತ್ತಮ ಉದಾಹರಣೆಯಾಗಿದ್ದಾರೆ.
ಈ ಭತ್ತದ ವಿಶೇಷತೆ : ವಿಭಿನ್ನ ಗುಣಲಕ್ಷಣ ಹೊಂದಿರುವ, ಉತ್ತಮವಾದ ತೆನೆ, ಹುಲ್ಲು, ರೋಗ ರಹಿತ ಗುಣಗಳಿರುವ ಈ ತಳಿಯನ್ನು ಸತತ ಏಳು ವರ್ಷ ಅಧ್ಯಯನ ನಡೆಸಿ ಎಲ್ಲಾ ಹವಾಮಾನಗಳಿಗೆ ಹೊಂದಾಣಿಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಭತ್ತದ ಹಿಡುವಳಿಯ ಜೊತೆಗೆ ಹುಲ್ಲು ಕೂಡ ಚೆನ್ನಾಗಿ ಬರುತ್ತದೆ. ಈ ಮೂಲಕ ಜಾನುವಾರಗಳಿಗೆ ಉಪಯೋಗವಾಗಲಿದೆ.