ಶಿವಮೊಗ್ಗ: ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿರುವುದಕ್ಕೆ ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ಸರ್ಕಾರ ಜಿಂದಾಲ್ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿದ್ದರು. ಇವರನ್ನು ಕರೆದು ಮಾತನಾಡುವ ಸೌಜನ್ಯವನ್ನು ಸರ್ಕಾರ ತೋರಲಿಲ್ಲ. ಅನಂದ್ ಸಿಂಗ್ ಅವರೊಬ್ಬರೇ ಅಲ್ಲ, ಇನ್ನೂ ಅನೇಕ ಶಾಸಕರು ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದಾರೆ. ರಾಜ್ಯದಲ್ಲಿ ಐಎಂಎ ಹಗರಣ, ಬರ ಪರಿಸ್ಥಿತಿ ಹೀಗೆ ಹಲವು ವಿಷಯಗಳ ಬಗ್ಗೆ ಶಾಸಕರು ಅಸಮಾಧಾನ ಹೊಂದಿದ್ದು, ಇವರು ರಾಜೀನಾಮೆ ನೀಡಿದರೆ ಬಿಜೆಪಿ ಸ್ವಾಗತಿಸುತ್ತದೆ ಎಂದರು.
ಮೈತ್ರಿ ಸರ್ಕಾರದ ವೈಭವೋಪೇರಿತ ಆಡಳಿತ:
ಸಿಎಂ ಕುಮಾರಸ್ವಾಮಿ ಅವರು ಇಷ್ಟು ದಿನ ತಾಜ್ ವೆಸ್ಟ್ಂಡ್ನಲ್ಲಿ ವಾಸ್ತವ್ಯ ಮಾಡಿ, ಎರಡು ದಿನ ಗ್ರಾಮ ವಾಸ್ತವ್ಯ ಮಾಡಿ ಈಗ ಅಮೆರಿಕಗೆ ಹಾರಿದ್ದಾರೆ. ವೈಭವೋಪೇರಿತ, ವಿಲಾಸಿತನ ಆಡಳಿತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತು ಕರ್ನಾಟಕದ ಹಿತದೃಷ್ಟಿಯಿಂದ ಇಂತಹ ಸರ್ಕಾರ ಹೋಗುವುದೇ ಒಳ್ಳೆಯದು ಅಂತ ರಾಜೀನಾಮೆ ನೀಡಿದ್ದಾರೆ ಎಂದರು.