ಶಿವಮೊಗ್ಗ: ಕುಮಾರಸ್ವಾಮಿ ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ಮಂಗಳೂರಿನ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್ಡಿಕೆ ವಿಡಿಯೋ ರಿಲೀಸ್ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ.
ಈಗ ಜೆಡಿಎಸ್ ಎಂಎಲ್ಎಗಳು ಅಲ್ಲೊಂದು ಇಲ್ಲೊಂದು ಸ್ಥಾನ ಗೆಲ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಸಹ ಬಿಜೆಪಿಗೆ ಬರಲಿದ್ದಾರೆ. ಕುಮಾರಸ್ವಾಮಿ ಅವರು ಮಂಗಳೂರು ಗಲಭೆಯ ಬಗ್ಗೆ ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಮಂಗಳೂರಿನಲ್ಲಿ ಯಾರು ಗಲಭೆ ಮಾಡಿದ್ರು, ಪೊಲೀಸರ ಮೇಲೆ ಯಾರು ಕಲ್ಲು ತೂರಿದರು, ವ್ಯಾನ್ಗಳಲ್ಲಿ ಕಲ್ಲು ತಂದು ಹಾಕಿ ಕಲ್ಲು ತೂರಾಟ ಮಾಡಿದವರಿಗೆ ಸಹಾಯ ಮಾಡಿದವರು ಯಾರು? ಅಂತ ರಾಜ್ಯದ ಜನ ಮಾಧ್ಯಮಗಳಲ್ಲೆ ನೋಡಿದ್ದಾರೆ. ಇನ್ನು ಈ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒತ್ತಾಯಿಸಿದ್ದರು. ಅದರಂತೆ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ನ್ಯಾಯಾಂಗ ತನಿಖೆಯ ವರದಿ ಬರುವವರೆಗೂ ಕಾಯುವುದಕ್ಕೆ ಇವರಿಗೆ ಆಗೋದಿಲ್ಲ. ಹೀಗಾಗಿ ತಾವು ಬದುಕಿದ್ದೇವೆ ಎಂದು ತೋರಿಸಲು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ಬಗ್ಗಲ್ಲ ಎಂದರು.
ಶೃಂಗೇರಿಯ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ಗೆ ಮಸಿ ಬಳಿಯುವಂತಹ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಜನ ತಿರಸ್ಕಾರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಬೆಳವಣಿಗೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
'ಸಿದ್ದು ಮೋದಿಗೆ ಹಿಟ್ಲರ್ ಪದ ಬಳಕೆ ಸರಿಯಲ್ಲ, ದೇಶದ ಕ್ಷಮೆ ಕೇಳಬೇಕು':
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾರನ್ನು ಹಿಟ್ಲರ್ ಅವರಿಗೆ ಹೋಲಿಸಿರುವುದು ಖಂಡನೀಯ. ಸಿದ್ದರಾಮಯ್ಯ ತಕ್ಷಣ ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದರು. ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡ್ರು, ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಇನ್ನೂ ಅವರಿಗೆ ಬುದ್ದಿ ಬಂದಿಲ್ಲ. ನರೇಂದ್ರ ಮೋದಿಯನ್ನು ಹಿಟ್ಲರ್ ಎಂದು ಕರೆದಿದ್ದಿರಾ, ರಾಜ್ಯದ ಜನ ನಿಮ್ಮನ್ನು ಎಲ್ಲಿ ಕೂರಿಸುತ್ತಾರೆ ಅಂತ ನೋಡ್ತಾ ಇರಿ ಎಂದರು.