ಶಿವಮೊಗ್ಗ: ಅನರ್ಹ ಶಾಸಕರ ಬಗ್ಗೆ ಒಬ್ಬೊಬ್ಬರು ಒಂದೂಂದು ರೀತಿ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪಕ್ಷದ ನಾಯಕರುಗಳಿಗೆ ಕಿವಿಮಾತು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ರಾಜೀನಾಮೆ ನೀಡದೆ ಹೋಗಿದ್ದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇದರಿಂದ ಅನರ್ಹ ಶಾಸಕರ ಕುರಿತು ಸವದಿ ಹಾಗೂ ರೇಣುಕಾಚಾರ್ಯ ಬಹಿರಂಗವಾಗಿ ಮಾತನಾಡಬಾರದು ಎಂದಿದ್ದಾರೆ. ಜನರ ಆಶೀರ್ವಾದ ಮತ್ತು ಮೈತ್ರಿ ಸರ್ಕಾರವನ್ನು ಅನರ್ಹ ಶಾಸಕರು ತಿರಸ್ಕರಿಸಿದ್ದರಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.
ಅನರ್ಹ ಶಾಸಕರ ಕುರಿತು ಮತ್ತೆ ಮತ್ತೆ ಚರ್ಚೆ ನಡೆಸುವುದು ಸರಿಯಲ್ಲ. ಅನರ್ಹ ಶಾಸಕರಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅವರು ಹೇಳಿದಂತೆ ನಾವು ಕೇಳಲೇಬೇಕು. ಅವರಿಗೆ ಪಕ್ಷದ ಟಿಕೆಟ್ ನೀಡಬೇಕು. ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.
ಟ್ಟಿಪ್ಪು ಜಯಂತಿ ಕಾಂಗ್ರೆಸ್ ಕುತಂತ್ರ
ಟಿಪ್ಪು ಜಯಂತಿ ಬೇಕು ಅಂತ ಯಾರು ಕೇಳಿರಲಿಲ್ಲ. ಆದರೂ ಟಿಪ್ಪು ಜಯಂತಿ ಶುರು ಮಾಡಿದರು. ಟಿಪ್ಪು ಜಯಂತಿ ಆಚರಣೆ ಬೇಡ. ಮೂರ್ತಿ ಪೊಜೆ ಬೇಡ ಅಂತ ಸಿ.ಎಂ.ಇಬ್ರಾಹಿಂ ಅವರೇ ಹೇಳುತ್ತಿದ್ದಾರೆ. ಟಿಪ್ಪುವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಬೇಡ. ಟಿಪ್ಪು ಜಯಂತಿ ಬೇಕಾದವರು ಅವರವರ ಮನೆಯಲ್ಲಿ ಪೊಜೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಟಿಪ್ಪುವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಂಡು ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದರು.
ಡಿ.ಕೆ.ಶಿವಕುಮಾರ್ ಮೆರವಣಿಗೆಗೆ ಖಂಡನೆ
ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ. ಡಿ.ಕೆ.ಶಿವಕುಮಾರ್ ಮೆರವಣಿಗೆಯಲ್ಲಿ ಇದು ಬಹಿರಂಗವಾಗಿದೆ. ಡಿಕೆಶಿ ಮೆರವಣಿಗೆ ನೋಡಿ ರಾಜ್ಯದ ಜನ ಅಸಹ್ಯಪಟ್ಟಿದ್ದಾರೆ. ಅವರು ಜೈಲಿನಿಂದ ಬೇಲ್ ತೆಗೆದುಕೊಂಡು ಬಂದಿದ್ದಾರಷ್ಟೆ. ದೇಶಕ್ಕಾಗಿ ಒಲಪಿಂಕ್ನಲ್ಲಿ ಗೆದ್ದು ಪದಕ ತಂದಿಲ್ಲ ಅಥವಾ ಪಾಕಿಸ್ತಾನದಿಂದ ಬಂದ ಅಭಿನಂದನ್ ರೀತಿ ಸಾಧನೆ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಶಿವಕುಮಾರ್ ಕಾಂಗ್ರೆಸ್ ಬಿಟ್ಟು ಯಾವ ಬಾವುಟ ಬೇಕಾದರೂ ಹಿಡಿಯಲಿ ಅದು ಅವರ ವೈಯಕ್ತಿಕ ವಿಚಾರ. ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಮನೆಯವರು ಸಾಕಷ್ಟು ನೋವು ಅನುಭವಿಸಿದ್ದಾರೆ. ನಮ್ಮ ತಪ್ಪಿನಿಂದ ಮನೆಯವರಿಗೂ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಿದೆ. ಕಾಂಗ್ರೆಸ್ ಈಗಲಾದರೂ ಸಹ ಪಾಠ ಕಲಿಯದೆ ಹೋದರೆ ನಿರ್ನಾಮವಾಗಲಿದೆ ಎಂದರು.