ಶಿವಮೊಗ್ಗ: ರಾಜಕೀಯ ಪಕ್ಷವಾದ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಬೇಕು. ಈ ಮೂಲಕ ದೇಶ ಸ್ವಾತಂತ್ರದ ಕಿಚ್ಚು ಹಚ್ಚಬೇಕೆಂದು ವಿನಾಯಕ ದಾಮೋದರ್ ಸಾವರ್ಕರ್ ಕರೆ ಕೊಟ್ಟಿದ್ದರು. ಅದರ ಮೇರೆಗೆ ಶಿವಮೊಗ್ಗದಲ್ಲಿ 1945ರಲ್ಲಿ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಮಹಾಸಭಾವು ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿಕೊಂಡು ಬರುತ್ತಿದೆ. 11 ದಿನಗಳ ಕಾಲ ಶಿವಮೊಗ್ಗ ನಗರದ ಪಾರ್ವತಿ ಭೀಮೇಶ್ವರ ದೇವಾಲಯದಲ್ಲಿ ಇಡಲಾಗುವ ಹಿಂದೂ ಮಹಾಸಭಾ ಗಣಪತಿಗೆ 79 ವರ್ಷಗಳ ಇತಿಹಾಸ.
ಗಣಪತಿ ಸ್ಥಾಪನೆ ಇತಿಹಾಸ: ಸ್ವಾತಂತ್ರದ ಕಿಚ್ಚು ದೇಶದಲ್ಲಿ ಹೆಚ್ಚಾಗಿದ್ದ ಸಮಯದಲ್ಲಿ ಸಾವರ್ಕರ್ ದೇಶದಲ್ಲಿ ಹಿಂದೂ ಮಹಾಸಭಾ ಎಂಬ ರಾಜಕೀಯ ಪಕ್ಷವನ್ನು ಕಟ್ಟುತ್ತಾರೆ. ಪಕ್ಷದ ಕುರಿತು ದೇಶದ ಪ್ರವಾಸ ನಡೆಸುತ್ತಾರೆ. ಅದರಂತೆ 1944ರಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾದ ಜಿಲ್ಲಾ ಪ್ರಥಮ ಸಮಾವೇಶ ನಡೆಸಲಾಗುತ್ತದೆ. ಈ ಸಮಾವೇಶದಲ್ಲಿ ಸಾವರ್ಕರ್ ಭಾಗಿಯಾಗುತ್ತಾರೆ. ಶಿವಮೊಗ್ಗ ಜಿಲ್ಲೆಯ ಎಸ್.ಬಿ ಮಂಜುನಾಥ್ ರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ.
ಈ ಸಮಾವೇಶದಲ್ಲಿ ಸಾವರ್ಕರ್ ಅವರು ಕರೆ ನೀಡಿದ ಮೇರೆಗೆ ಹಿಂದೂ ಮಹಾಸಭಾದ ವತಿಯಿಂದ ಗಣೇಶೋತ್ಸವ ನಡೆಸಲು ತೀರ್ಮಾನ ಮಾಡಲಾಗುತ್ತದೆ. ಈ ವೇಳೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಹ ಗಣೇಶೋತ್ಸವ ನಡೆಸುವ ಮೂಲಕ ದೇಶದ ಜನರಲ್ಲಿ ಜಾಗೃತಿ ಹಾಗೂ ಒಗ್ಗೂಡಿ ಹೋರಾಟ ನಡೆಸಲು ಕರೆ ನೀಡಿರುತ್ತಾರೆ. ಇದರಿಂದ ಪ್ರೇರಿತರಾದ ಶಿವಮೊಗ್ಗದ ಹಿಂದೂ ಮಹಾಸಭಾವು ನಗರದ ಭೀಮೇಶ್ವರ ದೇವಾಲಯದ ಆವರಣದಲ್ಲಿ ಗಣೇಶೋತ್ಸವ ನಡೆಸುತ್ತದೆ. ಈ ಕಾರ್ಯಕ್ರಮ ಇಂದಿಗೂ ಹಾಗೇ ನೆರವೇರಿಸಿಕೊಂಡು ಬರುತ್ತಿದೆ.
ಮಹಾತ್ಮ ಗಾಂಧಿ ಹತ್ಯೆಯಾದ ನಂತರ ಹಿಂದೂ ಮಹಾಸಭಾದ ಬದಲಾಗಿ ಹಿಂದು ಸಂಘಟನಾ ಮಹಾಮಂಡಳಿ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಹಿಂದೂಗಳ ಅಭ್ಯುದಯ ಹಾಗೂ ಸಂಘಟನೆಯ ದೃಷ್ಟಿಯಿಂದ ಪ್ರಾರಂಭವಾದ ಗಣೇಶೋತ್ಸವ ಇಂದಿಗೂ ಮುಂದುವರೆಯುತ್ತಿದೆ. ಈ ಸಮಿತಿಯಲ್ಲಿ ಶಿವಮೊಗ್ಗ ನಗರದ ಎಲ್ಲಾ ಸಮಾಜ, ರಾಜಕೀಯ ಪಕ್ಷಗಳ ಮುಖಂಡರಿದ್ದಾರೆ.
ವಿಜೃಂಭಣೆಯಿಂದ ನಡೆಯುವ ನಿಮಜ್ಜನ ಮೆರವಣಿಗೆ: ಗಣೇಶ ಚರ್ತುರ್ಥಿಯಂದು ಪ್ರತಿಷ್ಠಾಪನೆ ಮಾಡುವ ಗಣೇಶನನ್ನು ಅನಂತ ಚತುರ್ಥಿ ದಿನ ನಿಮಜ್ಜನ ಮಾಡಲಾಗುತ್ತದೆ. ಅನಂತ ಚತುರ್ಥಿ ದಿನ ಕೋಟೆಯ ಭೀಮೇಶ್ವರ ದೇವಾಲಯದಿಂದ ಹೊರಟ ನಿಮಜ್ಜನ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ಕೋಟೆ ಪೊಲೀಸ್ ಠಾಣೆ ರಸ್ತೆಯ ಮೂಲಕ ಭೀಮೇಶ್ವರ ದೇವಾಲಯಕ್ಕೆ ತಲುಪಿ ಪಕ್ಕದ ತುಂಗಾ ನದಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮೆರವಣಿಗೆಯು ಶಾಂತಿಯುತವಾಗಿ ನಡೆದಿತ್ತು. ಆದರೆ 1947ರಲ್ಲಿ ಅಹಿತಕರ ಘಟನೆ ನಡೆದಿದ್ದವು. ಈ ಘಟನೆ ಬಳಿಕ ಹಿಂದೂ ಮಹಾಸಭಾ ಸಮಿತಿಯು ಹೈಕೋರ್ಟ್ಗೆ ಹೋಗಿ ಕೇಸು ಹಾಕಿ ಪ್ರಾರ್ಥನಾ ಮಂದಿರ ಮುಂದೆ ಮೆರವಣಿಗೆ ನಡೆಸಲು 1950ರಲ್ಲಿ ಆದೇಶ ಪಡೆದುಕೊಳ್ಳುತ್ತಾರೆ. ಮೊದಲು ಗಣಪನ ಮೆರವಣಿಗೆ ರಾತ್ರಿ ವೇಳೆ ನಡೆಯುತ್ತಿತ್ತು. ಕಾಲಾನಂತರದಲ್ಲಿ ಮೆರವಣಿಗೆ ಹಗಲಿಗೆ ಬಂತು. ಹಾಲಿ ಬೆಳಗ್ಗೆ 10:30ಕ್ಕೆ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 2 ಗಂಟೆಗೆ ನಿಮಜ್ಜನ ನಡೆಸಲಾಗುತ್ತದೆ.
ಇಂದಿಗೂ ಬಿಗಿ ಬಂದೋಬಸ್ತ್: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಡೆದ ಗಲಭೆಯ ಕರಿಛಾಯೆ ಇನ್ನೂ ಇಲ್ಲಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿರುತ್ತದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಸರಳ ಆಚರಣೆಗೆ ಅನುಮತಿ ನೀಡಲಾಗುತ್ತದೆ : ಎಸ್ಪಿ ಲಕ್ಷ್ಮಿ ಪ್ರಸಾದ್