ಶಿವಮೊಗ್ಗ: ಜಿಲ್ಲಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಕಳೆದ 5 ದಿನಗಳಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಈಗಾಗಲೇ ತುಂಗಾ ಅಣೆಕಟ್ಟು ಭರ್ತಿಯಾಗಿ ನದಿಗೆ ನೀರು ಬಿಡಲಾಗುತ್ತಿದೆ. ಇಂದು ಸುಮಾರು 70 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಜಿಲ್ಲಾಡಳಿತ ನದಿ ಪಾತ್ರದ ಜನರ ಬಗ್ಗೆ ಎಚ್ಚರಿಕೆಯನ್ನು ವಹಿಸಿದೆ. ಅದರಂತೆ ಶಿವಮೊಗ್ಗ ನಗರದ ನದಿ ಪಾತ್ರದ ಬಡಾವಣೆಯ ಜನರಿಗೆ ಪಾಲಿಕೆ ಆಟೋದಲ್ಲಿ ಅನೌನ್ಸ್ ಮೂಲಕ ಎಚ್ಚರಿಕೆ ನೀಡಿದೆ. ಜಿಲ್ಲೆಯ ಸಾಗರದ ವರದಾ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ತೋಟ, ಭತ್ತ ನಾಶವಾಗಿವೆ.
ಅಲ್ಲದೇ ಶಿವಮೊಗ್ಗ ತಾಲೂಕು ಯಲವಟ್ಟಿ ದೊಡ್ಡಕೆರೆ ಕೊಡಿ ಬಿದ್ದು, ಪಕ್ಕದ ಅಡಕೆ ತೋಟಕ್ಕೆ ನೀರು ನುಗ್ಗಿದೆ. ಅಲ್ಲದೇ ನಾಟಿ ಮಾಡಿದ ಭತ್ತದ ಗದ್ದೆಗೆ ನುಗ್ಗಿದ ಪರಿಣಾಮ ನಾಟಿ ಮಾಡಿದ ಸಸಿ ಕೊಚ್ಚಿ ಹೋಗಿದೆ. ಜಿಲ್ಲೆಯಲ್ಲಿ ಇಂದು ಕೂಡಾ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.