ಶಿವಮೊಗ್ಗ: ಕೊರೆದ ಬೋರ್ವೆಲ್ಗಳು ವಿಫಲವಾದಾಗ, ತಕ್ಷಣ ಅದನ್ನು ಸರಿಯಾಗಿ ಮುಚ್ಚಿ ಸ್ಥಳೀಯಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಂತರ್ಜಲ ನಿರ್ವಹಣೆ ಕುರಿತಾದ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು. ಬೋರ್ವೆಲ್ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲಾಗಿದೆಯೇ ಎಂದು ಪರಿಶೀಲಿಸಬೇಕು. ಸರ್ಕಾರಿ ಇಲಾಖೆಗಳು ಸಹ ಬೋರ್ವೆಲ್ಗಳನ್ನು ಕೊರೆಯುವ ಸಂದರ್ಭದಲ್ಲಿ ಸ್ಥಳೀಯಾಡಳಿತದ ಗಮನಕ್ಕೆ ತರಬೇಕು. ತಮ್ಮ ವ್ಯಾಪ್ತಿಯಲ್ಲಿರುವ ವಿಫಲ ಕೊಳವೆ ಬಾವಿಗಳ ಸಂಖ್ಯೆ, ಅವುಗಳನ್ನು ಮುಚ್ಚಿರುವ ಬಗ್ಗೆ ವರದಿಯನ್ನು ಪ್ರತಿ ತಿಂಗಳು ಪಿಡಿಒಗಳು ಮತ್ತು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಲ್ಲಿಸಬೇಕು. ವಿಫಲ ಕೊಳವೆ ಬಾವಿಗಳನ್ನು ಮುಚ್ಚುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಳೆದ ತ್ರೈಮಾಸಿಕದಲ್ಲಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದು ಸಾವಿರ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಶೇಖ್ ದಾವೂದ್ ಅವರು ಮಾಹಿತಿ ನೀಡಿದರು.
ಅನುಮತಿ ಕಡ್ಡಾಯ:
ಇನ್ನು ಮುಂದೆ ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗಾಗಿ ಅಂತರ್ಜಲವನ್ನು ಉಪಯೋಗಿಸುವವರು ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿಯನ್ನು ಪಡೆಯಬೇಕಾಗಿದೆ. ದಿನನಿತ್ಯ 25 ಕ್ಯೂಬಿಕ್ ಮೀಟರ್ಗಿಂತ ಕಡಿಮೆ ಅಂತರ್ಜಲ ಬಳಕೆ ಮಾಡುವ ವಾಣಿಜ್ಯ ಸಂಸ್ಥೆಗಳು, ಜಿಲ್ಲಾ ಮಟ್ಟದ ಸಮಿತಿಯಿಂದ ಅದಕ್ಕಿಂತ ಹೆಚ್ಚಿನ ಪ್ರಮಾಣದ ಅಂತರ್ಜಲ ಬಳಕೆ ಮಾಡುವವರು ರಾಜ್ಯ ಮಟ್ಟದ ಸಮಿತಿಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.