ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಿ ದೇವಸ್ಥಾನದ ತಾತ್ಕಾಲಿಕ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿ ರದ್ದು ಮಾಡಬೇಕು. ಜಿಲ್ಲಾಧಿಕಾರಿ ಈಡಿಗ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಆಗಿ ಮನವಿ ಸಲ್ಲಿಸಲಾಗಿದೆ.
ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯ ರಾಜ್ಯ ಹಾಗೂ ದೇಶದ ಭಕ್ತ ರಾಷ್ಟ್ರದ ಕೇಂದ್ರವಾಗಿದೆ. ಈ ದೇವಸ್ಥಾನದ ಉಸ್ತುವಾರಿಯನ್ನು ಧರ್ಮದರ್ಶಿ ರಾಮಪ್ಪ ಅವರ ಕುಟುಂಬ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದೆ. ದಲಿತರು, ಹಿಂದುಳಿದವರ ಹಾಗೂ ಈಡಿಗ ಸಮುದಾಯದ ತಮ್ಮ ಮನೆ ದೇವರು ಎಂದು ಪೂಜಿಸುತ್ತಾ ಬಂದಿದೆ. ಇಂತಹ ಭಕ್ತರ ಶ್ರದ್ಧಾ ಕೇಂದ್ರದ ಮೇಲೆ ಸರ್ಕಾರದ ಹಸ್ತಕ್ಷೇಪ ಆಗಿರುವುದು ಖಂಡನೀಯ ಎಂದು ಅಸಮಾಧಾನ ಹೊರ ಹಾಕಿದ್ರು.
ಹಾಗಾಗಿ ಜಿಲ್ಲಾಧಿಕಾರಿಗಳು ಸಿಗಂದೂರು ದೇವಸ್ಥಾನಕ್ಕೆ ನೇಮಿಸಿರುವ ಮೇಲ್ವಿಚಾರಣಾ ಮತ್ತು ಸಲಹಾ ಸಮಿತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಹಾಗೇ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಹಾಗೂ ಜಿಲ್ಲಾಧಿಕಾರಿಗಳು ಈಡಿಗ ಸಮುದಾಯದ ಕುರಿತು ಸ್ವಯಂ ಘೋಷಿತ ಸಂಘ ಎಂದಿರುವುದಕ್ಕೆ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.