ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ಇಂದು ಶಿವಮೊಗ್ಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆರೋಪ-ಪ್ರತ್ಯಾರೋಪಗಳು ಹಾಗೂ ಮಾತಿನ ಚಕಮಕಿ ನಡೆಯಿತು.
ಪಾಲಿಕೆ ಮೇಯರ್, ಲತಾ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.ಇದನ್ನ ಬಗೆ ಹರಿಸುವಲ್ಲಿ ಪಾಲಿಕೆ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಕಾಂಗ್ರೆಸ್ನ ಹೆಚ್.ಸಿ.ಯೋಗೀಶ್ ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧ್ವನಿಗೂಡಿಸಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಳೆ ಕೈಕೊಟ್ಟಿದೆ. ಇದರ ಬಗ್ಗೆ ಪಾಲಿಕೆ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ಸಭೆಯಲ್ಲಿ ತಿಳಿಸಬೇಕು ಎಂದು ಒತ್ತಾಯಿಸಿದರು.
ಹೆಚ್.ಸಿ.ಯೋಗೀಶ್ ಫೋಟೋವೊಂದನ್ನ ಸಭೆಯಲ್ಲಿ ಪ್ರದರ್ಶಿಸಿ,ಈ ಫೋಟೋದಲ್ಲಿರುವ ನೀರು ಸಂಗ್ರಹ ಕೇಂದ್ರ ಕೆಟ್ಟು ಹೋಗಿದ್ದು,ಇದುವರೆಗೂ ಇದನ್ನು ಸರಿಪಡಿಸಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರು ಯಾವುದೋ ಹಳೆಯ ಪೋಟೋ ತೋರಿಸಿ ಸಭೆಯನ್ನು ದಾರಿ ತಪ್ಪಿಸಬೇಡಿ ವಾಸ್ತವ ಅರಿತು ಮಾತನಾಡಿ ಎಂದರು. ಈ ಹಂತದಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದವು. ಉಪಮೇಯರ್ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟು ಹೋಗಿತ್ತು. ಅದನ್ನು ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ. ನೀವು ಮಾಡಿದ ಘನಕಾರ್ಯ ಇದು ಎಂದು ಕಾಂಗ್ರೆಸ್ ಜೆಡಿಎಸ್ ಸದಸ್ಯರನ್ನು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜೆಡಿಎಸ್ ಸದಸ್ಯರು, ನೀವು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದೀರಿ. ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ನಿಮ್ಮ ತಪ್ಪನ್ನು ನಮ್ಮ ಮೇಲೆ ಹಾಕಬೇಡಿ ಎಂದು ವಾದಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಸಭೆ ಸ್ತಬ್ಧವಾಯಿತು. ಮಳೆಯ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಪಾಲಿಕೆ ಈಗಾಗಲೇ ಎರಡು ದಿನಕ್ಕೆ ಒಂದು ಬಾರಿ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಹೇಗೆ ಬಗೆ ಹರಿಸಬೇಕು ಎಂಬುದರ ಬಗ್ಗೆ ಎಲ್ಲ ಸದಸ್ಯರು ಸಮನ್ವಯತೆಯಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಈ ರೀತಿ ಗದ್ದಲ ಮಾಡಿಕೊಂಡರೆ ಅಧಿಕಾರಿಗಳು ಇದನ್ನೇ ಕಾಯುತ್ತಿರುತ್ತಾರೆ. ಅವರಿಗೆ ನಿಮ್ಮಗಳ ನಡುವೆ ಈ ರೀತಿ ಘಟನೆ ಆಗುವುದು ಬೇಕಾಗಿರುತ್ತದೆ. ಆದ್ದರಿಂದ ಅದಕ್ಕೆ ಆಸ್ಪದ ಕೊಡದೆ ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಮಾರ್ಗ ಎಂದು ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.