ಶಿವಮೊಗ್ಗ: ಜಿಲ್ಲೆ ಕೋವಿಡ್-19ನಿಂದ ಮುಕ್ತವಾಗಲು ಸಾಕಷ್ಟು ಶ್ರಮವಹಿಸಿರುವುದು ಗ್ರಾಮೀಣ ಭಾಗದ ಕೊರೊನಾ ವಾರಿಯರ್ಸ್ ತಂಡ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯು ಕೊರೊನಾ ಪ್ರಕರಣಗಳಿಲ್ಲದೇ ಗ್ರೀನ್ ಝೋನ್ನಲ್ಲಿದೆ.
ಇದಕ್ಕಾಗಿ ಗ್ರಾಮೀಣ ಭಾಗದ ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.
ಗ್ರಾಮೀಣ ವಾರಿಯರ್ಸ್ ಸೇವೆ : ಗ್ರಾಮ ಪಂಚಾಯತ್ ಅಧ್ಯಕ್ಷರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವೈರಸ್ ಹಾವಳಿ ಶುರುವಾದಾಗಿನಿಂದ ಗ್ರಾಮಕ್ಕೆ ಬೇರೆ ಗ್ರಾಮ ಅಥವಾ ಸಿಟಿಗಳಿಂದ ಬಂದರೆ ಅವರ ಮಾಹಿತಿಯನ್ನು ಕಲೆ ಹಾಕುವುದು, ಪ್ರತಿ ಮನೆಗೆ ಭೇಟಿ ನೀಡುವುದು, ಮನೆಯಲ್ಲಿ ಎಷ್ಟು ಜನ ಇದ್ದಾರೆ, ಬೇರೆ ಊರಿನಿಂದ ಬಂದವರ ಮಾಹಿತಿ, ಅವರು ಯಾವ ಊರಿನಿಂದ ಬಂದವರು, ಅವರ ಹೆಸರು, ಅವರ ವಯಸ್ಸು ಸೇರಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿ ಪಂಚಾಯತ್ ಅಧ್ಯಕ್ಷರಿಗೆ ನೀಡುತ್ತಾರೆ.
ಬೇರೆ ಊರಿನಿಂದ ಬಂದವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವುದು, ಅವರಿಗೆ ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸುವುದು, ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹೋಂ ಕ್ವಾರಂಟೈನ್ನಲ್ಲಿರುವವರ ಮನೆಗಳಿಗೆ ಹೋಗಿ ಆರೋಗ್ಯ ವಿಚಾರಿಸುವುದು, ಅವರ ಆರೋಗ್ಯದ ಜೊತೆಗೆ ಅವರ ಮನೆಯವರ ಆರೋಗ್ಯವನ್ನು ವಿಚಾರಿಸಿ ಅದನ್ನು ತಮ್ಮ ಇಲಾಖೆಗೆ ವರದಿ ಮಾಡುತ್ತಾರೆ. ಅಲ್ಲದೆ ಈಗ ಪ್ರತಿ ಮನೆಗೆ ಭೇಟಿ ನೀಡಿ ಮನೆಯಲ್ಲಿ ಜ್ವರ, ಶೀತ ಸೇರಿದಂತೆ ಕೊರೊನಾ ಲಕ್ಷಣಗಳು ಇರುವ ಅನಾರೋಗ್ಯಕ್ಕೆ ತುತ್ತಾದವರ ಮಾಹಿತಿ ಪಡೆದು, ಅವಶ್ಯಕವಿದ್ದರೆ, ಅವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತದೆ.
ಕೊರೊನಾ ವಾರಿಯರ್ಸ್ ಅಳಲು : ಮನೆ ಮನೆ ಸರ್ವೆಗೆ ಹೋದಾಗ ಆಶಾ ಕಾರ್ಯಕರ್ತೆಯರನ್ನು ಜನ ಮನೆಯ ಬಳಿಯೇ ಬಿಟ್ಟುಕೊಳ್ಳುತ್ತಿರಲಿಲ್ಲ. ಬೇರೆ ಕಡೆಯಿಂದ ಬಂದವರ ಮಾಹಿತಿಯನ್ನು ಸಹ ನೀಡುತ್ತಿರಲಿಲ್ಲ. ಮಾಸ್ಕ್ ಹಾಕಿಕೊಳ್ಳಿ, ಬಿಸಿ ನೀರು ಕುಡಿಯಿರಿ, ಆರೋಗ್ಯ ಸರಿ ಇಲ್ಲದವರು ಸರಿಯಾದ ವೈದ್ಯಕೀಯ ಸೇವೆ ಪಡೆದುಕೊಳ್ಳಿ ಎಂದಾಗ ಜನ ಇವರನ್ನು ನಿರ್ಲಕ್ಷ್ಯದಿಂದ ನೋಡಿದ್ದಾರೆ. ಕೆಲವೊಮ್ಮೆ ಬೈದು ಕಳುಹಿಸಿದ್ದಾರೆ.
ಇಷ್ಟದಾರೂ ಸಹ ಗ್ರಾಮೀಣ ವಾರಿಯರ್ಸ್ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಿರುದ್ದ ಸಾಕಷ್ಟು ಹೋರಾಟ ನಡೆಸಿದ್ದಾರೆ. ತಮ್ಮನ್ನು ಜನ ಎಷ್ಟೇ ಕಡೆಗಣಿಸಿದರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡುವ ಗೌರವಧನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಸಹ ಗ್ರಾಮೀಣ ಭಾಗದ ಕೊರೊನಾ ವಾರಿಯರ್ಸ್ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.