ಶಿವಮೊಗ್ಗ: ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಎಂ ತವರು ಜಿಲ್ಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕಳೆದ ಶನಿವಾರ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಕಿಸಾನ್ ಮಹಾ ಪಂಚಾಯತ್ ಸಮಾವೇಶ ನಡೆದಿತ್ತು. ಅಂದು ರಾಕೇಶ್ ಟಿಕಾಯತ್, ಡಾ.ದರ್ಶನ್ ಪೌಲ್ ಹಾಗೂ ಯುದ್ವೀರ್ ಸಿಂಗ್ ಅವರು ಭಾಗಿಯಾಗಿದ್ದರು. ಈ ವೇಳೆ ರಾಕೇಶ್ ಟಿಕಾಯತ್ ತಮ್ಮ ಭಾಷಣದಲ್ಲಿ ‘ನಾವು ದೆಹಲಿಯಲ್ಲಿ ಹೋರಾಟ ಮಾಡಿದಂತೆ ಕರ್ನಾಟಕದಲ್ಲೂ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು. ರೈತರೆಲ್ಲರೂ ಟ್ರ್ಯಾಕ್ಟರ್ನಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕಬೇಕು’ ಎಂದು ಹೇಳಿದ್ದರು.
ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಅವರು ರಾಕೇಶ್ ಟಿಕಾಯತ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಸ್ವಯಂ ಪ್ರೇರಿತವಾದ ದೂರು ದಾಖಲಿಸಿಕೊಂಡಿದ್ದಾರೆ. ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಕೊಪ್ಪದ್ ದೂರುದಾರರಾಗಿದ್ದಾರೆ.
ರಾಕೇಶ್ ಟಿಕಾಯತ್ ವಿರುದ್ಧ ದೂರಿನ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಮಹಾ ಪಂಚಾಯತ್ ನವರು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ.