ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹಾಗೂ ಅವರ ನೇತೃತ್ವದ ಸಿಂಡಿಕೇಟ್ ತಂಡ ಜಯಭೇರಿ ಬಾರಿಸಿದೆ.
ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ಮತ ಎಣಿಕೆ ನಡೆದಿತ್ತು. ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಸಿಂಡಿಕೇಟ್ 6 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಸಿಂಡಿಕೇಟ್ 3 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಯಿತು. ಇದಕ್ಕೂ ಮೊದಲು ಅವಿರೋಧವಾಗಿ ಆಯ್ಕೆಯಾದ 4 ಸ್ಥಾನಗಳು ಸೇರಿ ಮೈತ್ರಿಕೂಟದ ಸಿಂಡಿಕೇಟ್ 9 ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಬೆಂಬಲಿತ ಸಿಂಡಿಕೇಟ್ 5 ಸ್ಥಾನ ಗಳಿಸಿದಂತಾಗುತ್ತದೆ. ಬ್ಯಾಂಕ್ನ ಅಧಿಕಾರ ಹಿಡಿಯಲು 7 ಮತಗಳು ಬೇಕಾಗಿರುವುದರಿಂದ ಮಂಜುನಾಥಗೌಡ ಅವರ ಸಿಂಡಿಕೇಟ್ಗೆ ಹಾದಿ ಸುಗಮವಾಗಿದೆ.
ವಿಶೇಷವೆಂದರೆ ಚುನಾವಣೆಯಲ್ಲಿ ಜಿ.ಎನ್.ಸುಧೀರ್ ಮೊದಲ ಬಾರಿಗೆ ಡಿಸಿಸಿಗೆ ಪ್ರವೇಶ ಪಡೆದರೆ, ಮಾಜಿ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಮರು ಪ್ರವೇಶ ಪಡೆದುಕೊಂಡಿದ್ದಾರೆ. ಇವರಿಬ್ಬರು ಸಹ ಕೇವಲ ಒಂದು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಉಳಿದ 11 ಹಾಲಿ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಘಗಳ ಕ್ಷೇತ್ರ ಸಾಗರ ಉಪವಿಭಾಗದಲ್ಲಿ ಒಂದು ಮತ ಮಾತ್ರ ಕುಲಗೆಟ್ಟಿದೆ. ಆರ್.ಎಂ.ಮಂಜುನಾಥಗೌಡ ಅವರು ಸತತ 9ನೇ ಬಾರಿ ಚುನಾಯಿತರಾಗಿ ದಾಖಲೆ ನಿರ್ಮಿಸಿದರೆ, ಶ್ರೀಪಾದರಾವ್ ಹೆಗಡೆ ಅವರು 6ನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಶ್ರೀಪಾದರಾವ್ ಅವರು ಇತ್ತೀಚೆಗಷ್ಟೆ ನಡೆದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಚುನಾವಣೆಯಲ್ಲೂ ನಿರ್ದೇಶಕರಾಗಿ ಚುನಾಯಿತರಾಗಿದ್ದರು.
ಮಂಜುನಾಥಗೌಡ ಮತ್ತು ಅವರ ಸಿಂಡಿಕೇಟ್ನವರು ವಿಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ವಿಜೇತರಿಗೆ ಹೂವಿನ ಹಾರಗಳನ್ನು ಹಾಕಿ ಘೋಷಣೆಗಳನ್ನು ಮೊಳಗಿಸಿದರು.