ಶಿವಮೊಗ್ಗ: ಹೊಸನಗರದ ಸುಮೇಧಾ ವಿವಿಧೋದ್ಧೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿದ್ದ ಅಡಕೆ ಕದ್ದ ಕಳ್ಳರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 21ರಂದು ಹೊಸನಗರ ಪಟ್ಟಣ ಸೌಹಾರ್ದ ಸಹಕಾರ ಸಂಘದಲ್ಲಿದ್ದ ಶೇಖರಿಸಿಟ್ಟಿದ್ದ 2 ಕ್ಚಿಂಟಲ್ 72 ಕೆ.ಜಿ ಅಡಕೆ ಕದ್ದಿದ್ದಾರೆ ಎಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಹೊಸನಗರದ ಮಾವಿನಕೊಪ್ಪದ ರವಿರಾಜ್ (32), ನಾಗರಾಜ್(31) ಹಾಗೂ ರಾಜೇಶ್(40) ಎಂಬುವವರನ್ನು ಬಂಧಿಸಿ, ಆರೋಪಿಗಳಿಂದ ಅಂದಾಜು ಮೌಲ್ಯ 1.33 ಲಕ್ಷ ರೂ ಮೌಲ್ಯದ 2 ಕ್ಚಿಂಟಾಲ್ 72 ಕೆಜಿ ಅಡಕೆ ಮತ್ತು ಕೃತ್ಯಕ್ಕೆ ಬಳಸಿದ 1 ಬೈಕ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಶಿವಾನಂದ ಪಿಎಸ್ಐ, ಎಎಸ್ಐ ಸತೀಶ್ ರಾಜ್ ಮತ್ತು ಸಿಬ್ಬಂದಿಗಳಾದ ಸುನೀಲ್, ರಂಜಿತ್, ಗಂಗಪ್ಪ, ಮಹೇಶ್ ಹಾಜರಿದ್ದರು. ಆರೋಪಿಯನ್ನು ಬಂಧಿಸಿದ ತಂಡಕ್ಕೆ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
![Shivamogga crime case](https://etvbharatimages.akamaized.net/etvbharat/prod-images/02-11-2023/kn-smg-05-police-recovery-7204213_01112023193603_0111f_1698847563_235.jpg)
ಶಿವಮೊಗ್ಗದಲ್ಲಿ ಸರಗಳ್ಳತನ ಪ್ರಕರಣ: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಅಪಹರಣ ಮಾಡಿದ ಇಬ್ಬರು ಸರಗಳ್ಳರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಪಟ್ಟಣದ ಸಿದ್ದೇಶ್ವರ ನಗರದ ನಿವಾಸಿ ಪ್ರವೀಣ್ ಹಡಗಲಿ(28) ಹಾಗೂ ಮಾಸೂರು ರಟ್ಟೆಹಳ್ಳಿಯ ಸರ್ವಜ್ಞನಗರದ ನಿವಾಸಿ ಆಕಾಶ್(21) ಬಂಧಿತ ಆರೋಪಿಗಳು.
ಆರೋಪಿಗಳು ಬೈಕ್ನಲ್ಲಿ ಬಂದು ವಿನೋಬನಗರದ 100 ಅಡಿ ರಸ್ತೆಯಲ್ಲಿ ಸುಮಾರು 55 ವರ್ಷದ ಮಹಿಳೆ ಬೈಕ್ನಲ್ಲಿ ಹೋಗುವಾಗ ಬೈಕ್ ತಾಗಿಸಿ ಮಹಿಳೆಯನ್ನು ಬಿಳಿಸಿ, ಬಳಿಕ ಮೇಲಕ್ಕೆ ಎತ್ತುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಆಕಾಶ್ ಹಾಗೂ ಪ್ರವೀಣ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 , ತುಂಗಾನಗರ ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 1 ಸರಗಳ್ಳತನ ಪ್ರಕರಣ ಹಾಗೂ ಉಡುಪಿಯಲ್ಲಿ ಎರಡು ಬೈಕ್ ಕದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ 9.48 ಲಕ್ಷ ಮೌಲ್ಯದ ಒಟ್ಟು 186 ಗ್ರಾಂ ಬಂಗಾರದ ಆಭರಣ ಹಾಗೂ 1 ಲಕ್ಷ ಮೌಲ್ಯದ 2 ದ್ವಿಚಕ್ರ ವಾಹನ ಸೇರಿ ಒಟ್ಟು 10.48 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ರಾಜ್ಯೋತ್ಸವ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಅಪಘಾತ: ಇಬ್ಬರು ಸಾವು, ಮತ್ತಿಬ್ಬರು ಗಂಭೀರ