ಶಿವಮೊಗ್ಗ: ಕಾರಿಗೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸನಗರದ ಹೆರಟೆ ಗ್ರಾಮದ ಬಳಿ ನಡೆದಿದೆ.
ಹೊಸನಗರ ಕಡೆಯಿಂದ ಹೊರಟಿದ್ದ ಲಾರಿ ಕೋಟೇಶ್ವರದ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ದಾವಣಗೆರೆ ಚಿನ್ಮಯಿ(23) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ದಾವಣಗೆರೆಯ ನಿವಾಸಿಗಳಾದ ಶ್ರೀನಿವಾಸ ಹಾಗೂ ಬೃಂದಾ ದಂಪತಿ ಜೆಸಿಐ ಟ್ರೈನರ್ಗಳಾಗಿದ್ದು, ಕೋಟೇಶ್ವರದಲ್ಲಿನ ಕಾರ್ಯಕ್ರಮ ಮುಗಿಸಿ ಮಕ್ಕಳಾದ ಚಿನ್ಮಯಿ ಮತ್ತು ಲಾಸ್ಯರ ಜೊತೆ ದಾವಣಗೆರೆ ಕಡೆ ಹೊರಟಿದ್ದರು. ಈ ವೇಳೆ ಹೆರಟೆ ಗ್ರಾಮದ ಬಳಿಯ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಚಿನ್ಮಯಿ ಸಾವನ್ನಪ್ಪಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಲಾರಿ ವಿದ್ಯುತ್ ಕಂಬಕ್ಕೆ ಗುದ್ದಿ ನೆಲಕ್ಕುರುಳಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.