ರಾಮನಗರ : ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಬಿಡದಿ ಬಳಿಯ ಬಾನಂದೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಡಿಸಿಎಂ ಡಾ.ಸಿ ಎನ್ ಅಶ್ವತ್ಥ್ ನಾರಾಯಣ, ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಈ ಯೋಜನೆಯನ್ನು ಕಾರ್ಯಗತ ಮಾಡಲಿರುವ ಖಾಸಗಿ ಸಂಸ್ಥೆಯು 125 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದೆ.
ಸರಕಾರ 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಯೋಜನೆಯನ್ನು ಘೋಷಿಸಿ 25 ಕೋಟಿ ರೂ. ಅನುದಾನವನ್ನೂ ನೀಡಿದೆ. ಸರಕಾರವೂ ಸೇರಿ ಎಲ್ಲರ ಸಹಕಾರದೊಂದಿಗೆ ಇಡೀ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದರು.
ಸಚಿವರಾದ ಅರವಿಂದ ಲಿಂಬಾವಳಿ ಮಾತನಾಡಿ, ಜ್ಞಾನಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಿದ್ದ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರು, ಹಳ್ಳಿಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಆಶಯಗಳು ನಮ್ಮನ್ನು ಮುನ್ನಡೆಸುತ್ತಿದ್ದು, ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳಲ್ಲಿದ್ದ ಪರಿಕಲ್ಪನೆಗಳೆಲ್ಲ ಇಲ್ಲಿ ಸಾಕಾರವಾಗಲಿವೆ ಎಂದರು.
ಇದನ್ನೂ ಓದಿ : ಕೋರ್ಟ್ನಲ್ಲಿ ವಾದ ಮುಗಿಸಿ ಮರಳುತ್ತಿದ್ದ ವಕೀಲನ ಮೇಲೆ ದುಷ್ಕರ್ಮಿಗಳಿಂದ ಮನಬಂದಂತೆ ಹಲ್ಲೆ
ಶ್ರೀಗಳ ಮಾತಾ, ಪಿತೃಗಳ ಗದ್ದುಗೆಗೆ ಪೂಜೆ : ಕಾರ್ಯಕ್ರಮಕ್ಕೂ ಮೊದಲು ಉಪ ಮುಖ್ಯಮಂತ್ರಿಗಳು, ಶ್ರೀಗಳ ಜತೆಯಲ್ಲಿ ಶ್ರೀ ಬಾಲಗಂಗಾಧರ ನಾಥ ಮಹಾ ಸ್ವಾಮೀಜಿ ಅವರ ಪೂರ್ವಾಶ್ರಮ ಜನ್ಮಧಾತರಾದ ಶ್ರೀಮತಿ ಬೋರಮ್ಮ ಮತ್ತು ಶ್ರೀ ಚಿಕ್ಕಲಿಂಗಪ್ಪ ಅವರ ಗದ್ದುಗೆಗೆ ಪೂಜೆ ನೆರವೇರಿಸಿದರು.