ರಾಮನಗರ: 100ಕ್ಕೂ ಹೆಚ್ಚು ಉದ್ಯಮಿಗಳ ಸೇವಾ ವೇದಿಕೆಯಾದ ಯುವ ಅನ್-ಸ್ಟಾಪೇಬಲ್ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು. ರಾಮನಗರ ಜಿಲ್ಲೆಯ ಆಯ್ದ 10 ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ನೆರವಾಗಲು 1,150 ಟ್ಯಾಬ್ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಈ ಸಂಬಂಧ 30ಕ್ಕೂ ಹೆಚ್ಚು ಕಂಪನಿಗಳ ಉನ್ನತ ಪ್ರತಿನಿಧಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಸರ್ಕಾರ ಸಂಕಲ್ಪ ಮಾಡಿದೆ. ಮುಂದಿನ 10 ವರ್ಷಗಳಲ್ಲಿ ಕರ್ನಾಟಕವು ದೇಶದ ಶಿಕ್ಷಣ, ಸಂಸ್ಕೃತಿಯ ರಾಜಧಾನಿಯಾಗಲಿದೆ ಎಂದರು.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕೆಂಬ ಉದ್ದೇಶದಿಂದಲೇ ಸ್ಥಳೀಯ ಪರಿಸರದ ಹಲವು ಶಾಲೆಗಳನ್ನು ವಿಲೀನಗೊಳಿಸಿ, ತಾಲೂಕಿಗೊಂದು ಕ್ಲಸ್ಟರ್ ಶಾಲೆಯನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಸಿಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ಮತ್ತು ಪುನಃ ಮನೆಗೆ ಬಿಡುವ ಅನುಕೂಲವನ್ನೂ ಕಲ್ಪಿಸಲಾಗುತ್ತಿದೆ. ಮಾಗಡಿ ತಾಲೂಕಿನಲ್ಲಿ ಇದು ಈಗ ಆರಂಭವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ದಾಖಲಾದ ಪೊಲೀಸ್ ಕೇಸ್ಗಳ ವಾಪಸ್ಗೆ 'ಮಹಾ' ನಿರ್ಧಾರ
ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ನಡುವೆ ಕೇವಲ ಶೇ.5ರಷ್ಟು ಮಾತ್ರ ಗುಣಮಟ್ಟದ ವ್ಯತ್ಯಾಸವಿದೆಯಷ್ಟೇ. ಆಧುನಿಕ ಉದ್ಯೋಗಗಳಿಗೆ ಆಯ್ಕೆಯಾಗುತ್ತಿರುವವರಲ್ಲಿ ಶೇ.70ರಷ್ಟು ಮಂದಿ ಸರ್ಕಾರಿ ಶಾಲೆಗಳಲ್ಲೇ ಕಲಿತವರಾಗಿದ್ದಾರೆ. ಈ ಶಾಲೆಗಳನ್ನು ಇನ್ನಷ್ಟು ಸುಧಾರಿಸಲು ಶಿಕ್ಷಣದ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸಂಪೂರ್ಣ ವಿಕೇಂದ್ರೀಕರಣ ಮತ್ತು ಸ್ವಾಯತ್ತತೆಯನ್ನು ತರಲಾಗುತ್ತಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತರದಾಯಿತ್ವವನ್ನು ಬೆಳೆಸಲಾಗುತ್ತಿದೆ ಎಂದರು.
7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ಭಾಗ್ಯ: ಯುವ ಅನ್-ಸ್ಟಾಪೇಬಲ್ ರಾಜ್ಯದ ನಾನಾ ಭಾಗಗಳಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸದ್ಯಕ್ಕೆ 2,500 ಟ್ಯಾಬ್ ವಿತರಿಸಲು ತೀರ್ಮಾನಿಸಿದೆ. ಈ ಪೈಕಿ ರಾಮನಗರ ಜಿಲ್ಲೆಯ ಆಯ್ದ 10 ಶಾಲೆಗಳಲ್ಲಿ 7, 8 ಮತ್ತು 9ನೇ ತರಗತಿಗಳಲ್ಲಿ ಓದುತ್ತಿರುವ 1,150 ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಚನ್ನಪಟ್ಟಣ ತಾ.ಅರಳಾಳುಸಂದ್ರ, ಮಾಗಡಿ ತಾ. ಕುದೂರು ಮತ್ತು ತಿಪ್ಪಸಂದ್ರ, ಕನಕಪುರ ತಾ.ದೊಡ್ಡಾಲಹಳ್ಳಿ ಮತ್ತು ರಾಮನಗರ ತಾ. ಅವ್ವೇರಹಳ್ಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳು, ಹಾಗೂ ಸಂಕೀಘಟ್ಟ, ಚಕ್ಕೆರೆ, ಗಾಣಕಲ್, ಉಯ್ಯಂಬಳ್ಳಿ, ಮತ್ತು ಮಾಗಡಿ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.