ರಾಮನಗರ: ಪ್ರಸಿದ್ಧ ಚನ್ನಪಟ್ಟಣ ಬೊಂಬೆ ಉದ್ಯಮವನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ‘ಒಂದು ನಿಲ್ದಾಣ, ಒಂದು ಉತ್ಪನ್ನ’ (ಒಎಸ್ಒಪಿ) ಕಾರ್ಯಕ್ರಮದಡಿ ಬೆಂಗಳೂರು ಹಾಗೂ ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಪ್ರಖ್ಯಾತ ಚನ್ನಪಟ್ಟಣದ ಗೊಂಬೆಗಳ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಿಭಾಗೀಯ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣದ ಗೊಂಬೆಗಳ ಮಾರಾಟ ಮಳಿಗೆ ಪ್ರಾರಂಭಿಸಲು ಪ್ರೋತ್ಸಾಹಿಸಿದ್ದಾರೆ. ಚನ್ನಪಟ್ಟಣದ ಗೊಂಬೆಗಳು ಮರದಿಂದ ತಯಾರಿಸಿರುವ ದೇಶೀಯ ಆಟಿಕೆಗಳಾಗಿದ್ದು, ರಾಮನಗರ ಜಿಲ್ಲೆಯ ಗೊಂಬೆಗಳ ಊರು ಎಂದು ಖ್ಯಾತಿ ಗಳಿಸಿರುವ ಚನ್ನಪಟ್ಟಣದಲ್ಲಿ ಇದನ್ನು ತಯಾರಿಸಲಾಗುತ್ತದೆ. ಈ ಆಕರ್ಷಕ ಮರದ ಆಟಿಕೆಗಳಿಗೆ ಭೌಗೋಳಿಕ ಸೂಚ್ಯಂಕ ಲಭಿಸಿದ್ದು, ಬೆಂಗಳೂರು ರೈಲ್ವೆ ವಿಭಾಗವು ಚನ್ನಪಟ್ಟಣ ಕರಕುಶಲ ವಸ್ತುಗಳನ್ನು ತಯಾರಿಸುವ ಕಲಾವಿದರ ಸಂಘದವರಿಗೆ ಚನ್ನಪಟ್ಟಣದ ಮರದ ಆಟಿಕೆಗಳನ್ನು ಮಾರಾಟ ಮಾಡಲು ಪ್ರಾಯೋಗಿಕವಾಗಿ ಮಳಿಗೆಯನ್ನು ಮಂಜೂರು ಮಾಡಿದೆ.
ರೈಲ್ವೆ ಸಚಿವಾಲಯವು ಆತ್ಮನಿರ್ಭರ ಭಾರತ ಅಭಿಯಾನದ ಅಡಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಸ್ಥಳೀಯ ಕರಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ ರಾಮನಗರ, ಚನ್ನಪಟ್ಟಣ, ಬೆಂಗಳೂರು ರೈಲ್ವೆ ನಿಲ್ದಾಣ, ಖ್ಯಾತ ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ರೈಲ್ವೇ ಸಚಿವಾಲಯ ಪ್ರೋತ್ಸಾಹಿಸಿದೆ.
ಇದನ್ನೂ ಓದಿ: ಕಂಬಳ ಕ್ರೀಡೆ ಉತ್ತೇಜನಕ್ಕೆ ಶೀಘ್ರ ಕ್ರಮ: ಸಚಿವ ನಾರಾಯಣಗೌಡ