ರಾಮನಗರ: ಆಟೋ ಚಾಲಕ ಜಯರಾಮು ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿಯಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಜಯರಾಮು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದವರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ಜಯರಾಮು ಅಂತ್ಯಕ್ರಿಯೆ ನೆರವೇರುತ್ತಿದ್ದು, ಆತನ ಇಚ್ಛೆಗೆ ಓಗೊಟ್ಟು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಜಯರಾಮು ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದ. ಅದರಲ್ಲಿ ತನ್ನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿಯವರು ಭಾಗಿಯಾಗಬೇಕು. ನನ್ನ ನಂತರ ನನ್ನ ಬುದ್ಧಿಮಾಂದ್ಯ ಮಗನಿಗೆ ಕುಮಾರಸ್ವಾಮಿಯವರು ಧನಸಹಾಯ ಮಾಡಬೇಕು. ನಿಮ್ಮ ಋಣವನ್ನು ನಾನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ. ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ.
ಇದನ್ನು ಓದಿ: ಕುಮಾರಣ್ಣ ನನ್ನ ಅಂತ್ಯಕ್ರಿಯೆಗೆ ಬರಬೇಕು: ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ
ಸದ್ಯ ಜಯರಾಮು ಇಚ್ಛೆಯಂತೆ ಹೆಚ್ಡಿಕೆ ತಮ್ಮ ಮಗ ನಿಖಿಲ್ ರೊಂದಿಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ತಂದೆಯಿಲ್ಲದೆ ಅನಾಥವಾದ ಕುಟುಂಬಸ್ಥರಿಗೆ ಪರಿಹಾರದ ಹಣ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಹಿಂದೊಮ್ಮೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಹೂ ಮಾರುತ್ತಿದ್ದ ಬಾಲಕಿಯನ್ನು ಮಾತನಾಡಿಸಿ, ಅವಳ ಕಷ್ಟ ಕೇಳಿ, ಆಕೆಗೆ ಮನೆ ಇಲ್ಲದೇ ಇರುವುದನ್ನು ಗಮನಿಸಿ ಮನೆ ಕಟ್ಟಿಸಿಕೊಟ್ಟು ಗಮನ ಸೆಳೆದಿದ್ದರು.