ರಾಮನಗರ: ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ತಾಲೀಮಿಗೆ ಚಾಲನೆ ನೀಡಿ, ನಂತರ ಸ್ವತಃ ತಾವೇ ಅಣಕು ತಾಲೀಮಿಗೆ ಒಳಗಾದರು.
ಆಸ್ಪತ್ರೆಗೆ ಭೇಟಿ ನೀಡಿದ ಅವರು, ಲಸಿಕೆ ತಾಲೀಮು ನಡೆಸುವ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಅಣಕು ತಾಲೀಮಿಗೆ ಮೊದಲು ತಾವೇ ನೋಂದಾಯಿಸಿಕೊಂಡು ಟೆಂಪರೇಚರ್ ಪರೀಕ್ಷೆಗೆ ಒಳಗಾದರು. ಬಳಿಕ ಲಸಿಕೆ ಪಡೆಯುವ ಹಾಗೂ ಇಪ್ಪತ್ತು ನಿಮಿಷ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರ ನಿಗಾದಲ್ಲಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಇವೆಲ್ಲ ಪ್ರಕ್ರಿಯೆಗಳ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಲಸಿಕೆ ನೀಡುವ ಕಾರ್ಯಕ್ರಮ ಜನಾಂದೋಲನದ ರೀತಿಯಲ್ಲಿ ಕೈಗೊಳ್ಳಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ ಎಂದು ಭರವಸೆ ನೀಡಿದರು.
ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ.ಈ ಲಸಿಕೆ ನೀಡುವುದು ಸವಾಲಿನ ಕೆಲಸ. ಅದಕ್ಕೆ ನಾಲ್ಕು ಹಂತಗಳ ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಲಸಿಕೆ ತಾಲೀಮು ಕೆಲಸ ಕೈಗೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂದು ತಾಲೀಮು ನಡೆಯುತ್ತಿದೆ. ರಾಮನಗರ ಜಿಲ್ಲೆ ಒಂದರಲ್ಲೇ 8,405 ಕೋವಿಡ್ ಯೋಧರಿಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತದ ನಂತರ ಪರಿಶೀಲನೆ, ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದವರನ್ನು ನಿಗಾದಲ್ಲಿ ಇರಿಸುವ ವ್ಯವಸ್ಥೆಯೂ ಆಗುತ್ತದೆ ಎಂದು ತಿಳಿಸಿದರು.
ಮೊದಲ ಡೋಸ್ ಕೊಟ್ಟ 28 ದಿನಗಳ ನಂತರ 2ನೇ ಡೋಸ್ ನೀಡಲಾಗುವುದು. ಇದು ಪ್ರಥಮ ಹಂತವಾಗಿರುತ್ತದೆ. 2ನೇ ಹಂತದಲ್ಲಿ ಶೇ 8 ರಿಂದ 10ರಷ್ಟು ಸಾರ್ವಜನಿಕರಿಗೆ, 3ನೇ ಹಂತದಲ್ಲಿ ಶೇ 20ರಷ್ಟು ಸಾರ್ವಜನಿಕರಿಗೆ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು.
ಓದಿ: ಕ್ವಾರಂಟೈನ್ ಕೇಂದ್ರದಲ್ಲಿ ವ್ಯಕ್ತಿ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 87 ಕೇಂದ್ರಗಳಲ್ಲಿ 8,405 ಕೋವಿಡ್ ಯೋಧರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. 2ನೇ ಹಂತದ ಹೊತ್ತಿಗೆ ಈ ಕೇಂದ್ರಗಳ ಸಂಖ್ಯೆಯನ್ನು 395ಕ್ಕೆ ಹೆಚ್ಚಿಸಲಾಗುವುದು. ಜತೆಗೆ, ಲಸಿಕೆ ಸಾಗಾಣಿಕೆ, ಪೂರೈಕೆ ಜಾಲ, ಸಿಬ್ಬಂದಿ, ಕೋಲ್ಡ್ ಸ್ಟೊರೇಜ್ ಇತ್ಯಾದಿ ಸೇರಿ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.