ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷ, ಹಾಲು ಉತ್ಪಾದಕರ ವಿರುದ್ಧ ರಾಜಕೀಯ ಮಾಡಿ ಎರಡು ದಿನಗಳ ಕಾಲ ಹಾಲನ್ನ ಡೈರಿಗೆ ಹಾಕಿಸಿಕೊಳ್ಳದೇ ಸರಿಸುಮಾರು ಒಂದು ಸಾವಿರ ಲೀಟರ್ ಹಾಲನ್ನು ಮಣ್ಣುಪಾಲು ಮಾಡಿದ್ದರು. ಇದೇ ವಿಚಾರ ಸಂಬಂಧ ಸೋಮವಾರ ಗ್ರಾಮದ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಾಲಿನ ಡೈರಿಯ ಕಾರ್ಯದರ್ಶಿ ವೆಂಕಟಾಚಲ ಹಾಗೂ ಡೈರಿ ಅಧ್ಯಕ್ಷ ಕೆಂಪೇಗೌಡ ಮಾಡಿದ ಈ ಕೆಲಸದ ಕುರಿತು ಖಾಸಗಿ ಮಾಧ್ಯಮವೊಂದು ವರದಿ ಮಾಡಿದ ಬಳಿಕ ಹಾಲು ಹಾಕಿಸಿಕೊಂಡಿದ್ದರು. ಆದರೆ ಮುಂದೆ ಮತ್ತೆ ಸಮಸ್ಯೆಯಾಗಬಹುದೆಂದು ಗ್ರಾಮದ ಜನರು ಹಾಗೂ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.
ಅಪರ ಜಿಲ್ಲಾಧಿಕಾರಿ ವಿಜಯ್ ಅವರಿಗೆ ಮನವಿ ಸಲ್ಲಿಸಿ, ಈ ಕೂಡಲೇ ಸಂಬಂಧಪಟ್ಟ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷನ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಮನವಿ ಮಾಡಿದರು. ಹಾಲನ್ನು ಡೈರಿಗೆ ಹಾಕಿಸಿಕೊಳ್ಳದೇ ವ್ಯರ್ಥ ಮಾಡಿರುವುದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.