ರಾಯಚೂರು: ಬೈಕ್, ಲಾರಿ ನಡುವೆ ರಸ್ತೆ ಅಪಘಾತ ಸಂಭವಿಸಿ, ನವದಂಪತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಾನ್ವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಈ ದಾರುಣ ಘಟನೆ ಸಂಭವಿಸಿದೆ. ಅಂಬಿಕಾ (21), ಹುಸೇನ್ ಯಲ್ಲಪ್ಪ(23) ಮೃತಪಟ್ಟ ನವದಂಪತಿಗಳಾಗಿದ್ದಾರೆ. ಅಂಬಿಕಾ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರೆ, ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಗಂಜಹಳ್ಳಿ ಗ್ರಾಮ ಹುಸೇನ್ ಜೊತೆ ಕಲ್ಮಲಾ ಗ್ರಾಮದ ಅಂಬಿಕಾ ಕಳೆದ ಎರಡ್ಮೂರು ತಿಂಗಳ ಹಿಂದೆ ವಿವಾಹವಾಗಿತ್ತು. ನಿನ್ನೆ ಅಮಾವಾಸ್ಯೆ ಹಿನ್ನೆಲೆ ಕಲ್ಮಲಾ ಗ್ರಾಮದ ದೇವಸ್ಥಾನಕ್ಕೆ ತೆರಳಿ ವಾಪಸ್ ಗಂಜಹಳ್ಳಿ ಗ್ರಾಮಕ್ಕೆ ಬರುತ್ತಿರುವಾಗ ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ನವದಂಪತಿ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.