ರಾಯಚೂರು: ನಗರದ ಜಿಲ್ಲಾ ಪಂಚಾಯತ್ ಜಲನಿರ್ಮಲ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ವಿಚಾರಣಾ ಸಭೆ ನಡೆಯಿತು.
ಈ ಸಭೆಯಲ್ಲಿ ಬೀದರ್ ಜಿಲ್ಲೆಯ ವಸತಿ ನಿಲಯವೊಂದರಲ್ಲಿ ವಿದ್ಯಾರ್ಥಿನಿಯರ ಮೇಲಿನ ಹಲ್ಲೆ ಹಾಗೂ ಹಾಸ್ಟೆಲ್ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಆದರೆ, ಹಾಸ್ಟೆಲ್ ಅಧಿಕಾರಿಗಳು ಇದನ್ನು ಮುಚ್ಚಿಹಾಕಲು ಇಂತಹ ಘಟನೆ ಘಟನೆ ನಡೆದಿಲ್ಲವೆಂದು ವಿದ್ಯಾರ್ಥಿಗಳ ಹೆಸರಿನಲ್ಲಿ ಪತ್ರ ಬರೆಸಿದ್ದರು. ಈ ವಿಷಯ ತಿಳಿದು ಆಕ್ರೋಶಗೊಂಡ ಆಯೋಗದ ಅಧ್ಯಕ್ಷ ಆಂತೋಣಿ ಸೆಬಾಸ್ಟಿಯನ್, ಸದಸ್ಯೆ ಡಾ. ಜಯಶ್ರೀ ಹಾಗೂ ಇತರೆ ಸದಸ್ಯರು ಪತ್ರ ಹಿಡಿದು ಅಧಿಕಾರಿಗಳ ವಿರುದ್ಧ ಗರಂ ಆದರು.
ಸಭೆಯಲ್ಲಿ ಇದರ ಬಗ್ಗೆ ಸಬೂಬು ನೀಡಲು ಮುಂದಾದ ಅಧಿಕಾರಿಗಳ ವಿರುದ್ಧ ನಿಮ್ಮ ಈ ಕಾರ್ಯ ಕ್ಷಮಿಸಲು ಅನರ್ಹ. ಇದರ ಬಗ್ಗೆ ಸಮಜಾಯಿಷಿ ನೀಡಲು ನಾವೇನು ಜೋಕರ್ ಅಲ್ಲ. ನೀವು ಜೋಕರ್ ಥರ ಆಡಬೇಡಿ. ನಿಜಾ ಹೇಳದಿದ್ದರೆ, ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು. ನಂತರ ಈ ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಾದೀತು ಎಂದು ಎಚ್ಚರಿಕೆ ಕೊಟ್ಟರು.