ರಾಯಚೂರು: ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗುತ್ತಿದ್ದು, ಕಳಪೆ ಕಾಮಗಾರಿ ತನಿಖೆಗೆ ಪ್ರತಿಪಕ್ಷಗಳು ಮುಂದಾಗಬೇಕು ಎಂದು ರೈತಪರ ಸಂಘಟನೆಗಳು ಒತ್ತಾಯಿಸಿವೆ.
ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಆರಂಭದಿಂದಲೂ ಕಳಪೆಯಾಗಿದೆ ಎಂದು ಸಂಘ-ಸಂಸ್ಥೆಗಳು ಆರೋಪ ಮಾಡುತ್ತಾ ಬಂದಿದ್ದವು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೇವಲ 500 ಕ್ಯೂಸೆಕ್ ನೀರು ಬಿಟ್ಟಾಗ, ನಾಲೆಯ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪೈಪ್ಲೈನ್ ಕಿತ್ತು ಹೋಗಿತ್ತು. ನೀರು ಬಿಡುವ ಆರಂಭದಲ್ಲಿಯೇ ಕಳಪೆ ಕಾಮಗಾರಿ ಕುರಿತು ಈಟಿವಿ ಭಾರತ ವರದಿ ಮಾಡಿದ್ದು, ಪೈಪ್ಲೈನ್ ಕಿತ್ತಿದ್ದರಿಂದ ಯಾವುದೇ ಸಮಸ್ಯೆಯಿಲ್ಲ. ನೀರು ಹರಿಸಲು ಯಾವುದೇ ತೊಂದರೆಯಿಲ್ಲ ಎಂದು ನಾಲೆಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಲು ಸ್ಪಷ್ಟಪಡಿಸಿದ್ದರು.
ದಿನದಿಂದ ದಿನಕ್ಕೆ ಮುಖ್ಯನಾಲೆ ಒಡ್ಡಿನ ಮಣ್ಣು ಕಿತ್ತು, ಭಾರಿ ಗಾತ್ರದ ಗುಂಡಿಯಾಗಿದೆ. ಗುತ್ತಿಗೆದಾರ ಈ ಗುಂಡಿಗೆ ಕಲ್ಲುಗಳನ್ನು ತುಂಬಿಸಿ ಮುಚ್ಚಲು ಪ್ರಯತ್ನಿಸಿದ್ದು, ಇದನ್ನು ಸ್ಥಳೀಯರು ವಿರೋಧಿಸಿದ್ದಾರೆ. ರಾಜ್ಯ ಸರ್ಕಾರವೇ ಗುತ್ತಿಗೆದಾರರ ಬೆಂಬಲಕ್ಕೆ ನಿಂತಿದೆ. ಅಧಿಕಾರಿ ವರ್ಗ ಕೆಲಸದ ಸ್ಥಳಕ್ಕೂ ಬರುತ್ತಿಲ್ಲ. ಹೀಗಾಗಿ ಆಧುನೀಕರಣ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗುತ್ತಿದ್ದು, ಕಳಪೆ ಕಾಮಗಾರಿ ತನಿಖೆಗೆ ಪ್ರತಿಪಕ್ಷಗಳು ಮುಂದಾಗಬೇಕು ಎಂದು ರೈತಪರ ಸಂಘಟನೆಗಳು ಒತ್ತಾಯಿಸಿವೆ.