ಮೈಸೂರು: ಬೆಂಗಳೂರು-ಮೈಸೂರು ದಶಪಥ ಯೋಜನೆಯು 2022ರ ಸೆಪ್ಟೆಂಬರ್ ಮುಂಚೆಯೇ ಪೂರ್ಣಗೊಳ್ಳಲಿದೆ. ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಧರ್ ಕನ್ನಡಿಗರು. ಇವರ ಶ್ರಮದಿಂದ ಎರಡೂ ಹಂತದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ರಸ್ತೆ ಕಾಮಗಾರಿ ವಿಚಾರದಲ್ಲಿ ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನಗೆ ಅಭಿವೃದ್ಧಿಯಷ್ಟೇ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಈ ಭಾಗದ ಜನರಿಗೆ ಅನುಕೂಲವಾಗಲಿ ಎಂದು ಬಹುದೊಡ್ಡ ಯೋಜನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅದು ಸಾಕಾರಗೊಳ್ಳಬೇಕೆಂಬುದಷ್ಟೇ ನನ್ನ ಧ್ಯೇಯ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆಯು 2022ರ ಸೆಪ್ಟೆಂಬರ್ ಮುಂಚೆಯೇ ಪೂರ್ಣಗೊಳ್ಳಲಿದೆ. 7,400 ಕೋಟಿ ರೂ. ಮೊತ್ತದ ಬೃಹತ್ ಯೋಜನೆಯಾಗಿದ್ದು, ಬೆಂಗಳೂರಿನಿಂದ ನಿಡಘಟ್ಟಕ್ಕೆ ಮೊದಲ ಹಂತದ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಎಲಿಯೂರು ಗ್ರಾಮದ ಓವರ್ ಬ್ರಿಡ್ಜ್ ನನ್ನ ಕ್ಷೇತ್ರಕ್ಕೆ ಬಾರದಿದ್ದರೂ ಮಂಡ್ಯ ಜನರ ಒಳಿತಿಗಾಗಿ ಅದಕ್ಕೆ ಒಪ್ಪಿಗೆ ಕೊಡಿಸಿದ್ದೇನೆ. ಶಿವರಾಮೇಗೌಡರು ಮಂಡ್ಯ ಸಂಸದರಾಗಿದ್ದಾಗ ಪಾಸ್ಪೋರ್ಟ್ ಸೇವಾ ಕೇಂದ್ರ ಹೇಗೆ ಮಂಜೂರು ಮಾಡಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ ಮಂಜೂರು ಮಾಡಿಸಿದೆ. ಅಲ್ಲಿನ ಕೆಲವರ ಒಳ ರಾಜಕೀಯದಿಂದ ಮಂಡ್ಯ ಬದಲು ಮದ್ದೂರಿನಲ್ಲಿ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.