ಮೈಸೂರು: ಮೈಸೂರು ಭಾಗದಲ್ಲಿ ಇನ್ನೂ ಕೂಡ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ನಿದರ್ಶನ ಎಂಬಂತೆ ವೈಯಕ್ತಿಕ ದ್ವೇಷದಿಂದ ಗ್ರಾಮದ ಕೆಲವು ಮುಖಂಡರು ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ್ದಾರೆ.
ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಈ ಬಹಿಷ್ಕಾರವನ್ನು ಕೊನೆಗೊಳಿಸಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ. ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ಮಹದೇವಪ್ಪ ಕುಟುಂಬ ಈ ಅನಿಷ್ಠ ಪದ್ಧತಿಗೆ ಒಳಗಾಗಿದೆ. ಈ ಕುಟುಂಬಕ್ಕೆ ಅದೇ ಗ್ರಾಮದ ಕೆಲವು ರೈತ ಸಂಘದ ಮುಖಂಡರು ವೈಯಕ್ತಿಕ ದ್ವೇಷಕ್ಕಾಗಿ ಕಳೆದ 45 ದಿನಗಳಿಂದ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಯಾರೂ ಸಹ ಇವರ ಜೊತೆ ಮಾತನಾಡುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ, ಇವರ ಜೊತೆ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಗ್ರಾಮದ ಮುಖಂಡರು ಈ ಕುಟುಂಬಕ್ಕೆ ಪಂಚಾಯಿತಿ ಮಾಡಿ ಬಹಿಷ್ಕಾರ ಹಾಕಿದ್ದಾರೆ.
![Social exclusion to family in mysore](https://etvbharatimages.akamaized.net/etvbharat/prod-images/kn-mys-3-social-excommunication-news-7208092_20072020142445_2007f_1595235285_7.jpg)
ಬಹಿಷ್ಕಾರಕ್ಕೆ ಕಾರಣವೇನು?
ಶಿರಮಳ್ಳಿ ಗ್ರಾಮದಲ್ಲಿ ಒಳಚರಂಡಿ ಮಾಡಲಾಗುತ್ತಿದ್ದು, ಈ ಕುಟುಂಬದವರ ಶೌಚಾಲಯವನ್ನು ಒಳಚರಂಡಿಗೋಸ್ಕರ ಒಡೆದು ಹಾಕಲು ತೀರ್ಮಾನಿಸಿತ್ತು. ಇದನ್ನು ಈ ಕುಟುಂಬದವರು ವಿರೋಧಿಸಿದ್ದಾರೆ. ಈ ಹಿನ್ನೆಲೆ ಗ್ರಾಮದ ಕೆಲವು ರೈತ ಸಂಘದ ಮುಖಂಡರು ಈ ಕುಟುಂಬದವರು ಪಂಚಾಯಿತಿಗೆ ವಿರುದ್ಧವಾಗಿ ಮಾತನಾಡುತ್ತಾರೆ ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ.
ಬಹಿಷ್ಕಾರಕ್ಕೆ ಒಳಗಾದ ಕುಟುಂಬಸ್ಥರು ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲವಂತೆ.