ಮೈಸೂರು: ಮೈಸೂರು ರಾಜಮನೆತನದಲ್ಲಿ ಶರನ್ನವರಾತ್ರಿ 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿತ್ತು. ಎಲ್ಲಾ ಸಂಪ್ರದಾಯಗಳನ್ನು ಚಾಚು ತಪ್ಪದೇ ಆಚರಿಸಲಾಗುತ್ತಿತ್ತು ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಸರಾ ಕುರಿತು ವಿವರಿಸಿದ್ದಾರೆ.
ಮೈಸೂರು ಅರಮನೆಯಲ್ಲಿ ಹಿಂದಿನ ಮಹಾರಾಜ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಲದಲ್ಲಿ ನವರಾತ್ರಿ ವಿಶೇಷವಾಗಿ ಆಚರಿಸಲಾಗುತ್ತಿತ್ತು. ಸಾಮಾನ್ಯವಾಗಿ ನಾವು ದಸರಾ ಅಂದರೆ 10ನೇ ದಿನ ವಿಜಯದಶಮಿ ಅದಕ್ಕೂ ಮುಂಚೆ ಪಾಂಡ್ಯ ನವಮಿವರೆಗೂ ಅದು ಶರನ್ನವರಾತ್ರಿ ಎಂದು ಹೇಳುತ್ತೇವೆ. ಧಾರ್ಮಿಕ ಅರ್ಥದಲ್ಲಿ ನೋಡುವುದಾದರೆ 9ನೇ ದಿನದವರೆಗೆ ಶರನ್ನವರಾತ್ರಿ ಹಾಗೂ 10ನೇ ದಿನ ದಸರಾ ಹಬ್ಬ, ಇದರಲ್ಲಿ ಅರಮನೆಯಲ್ಲಿ ಧಾರ್ಮಿಕವಾಗಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು ಎಂದು ವಿವರಿಸಿದರು.
ಧಾರ್ಮಿಕ ಆಚರಣೆಗಳಲ್ಲಿ 9ದಿನಗಳ ಕಾಲ ದೇವಿಗೆ ಗೌರವ ವಂದನೆ ಸಲ್ಲಿಸುವುದು ಹಾಗೂ ಮುಂದಿನ ವರ್ಷ ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ಹಿಂದೆ ಯುದ್ಧಕ್ಕೆ ಹೋಗುವ ಸಮಯದಲ್ಲಿ ಯೋಧರಿಗೆ ಒಳ್ಳೆಯದಾಗಲಿ, ರೈತರಿಗೂ ಒಳ್ಳೆಯದಾಗಲಿ ಎಂದು ಶರನ್ನವರಾತ್ರಿಯ ಸಂದರ್ಭದಲ್ಲಿ ಸಂಕಲ್ಪ ಮಾಡಿಕೊಂಡು ಪೂಜೆ ಸಲ್ಲಿಸುತ್ತಿದ್ದೆವು. ಆ ಆಚರಣೆ ಇಂದಿಗೂ ಮುಂದುವರೆದುಕೊಂಡು ಬಂದಿದೆ ಎಂದು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.