ಮೈಸೂರು: ಶ್ರೀ ಅವಧೂತ ದತ್ತ ಪೀಠ (ಗಣಪತಿ ಸಚ್ಚಿದಾನಂದ ಆಶ್ರಮ) ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಕಾರು ಚಾಲಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಾರು ಚಾಲಕ ಮುರಳೀಧರ್(58) ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಳಿ ಹಲವು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ಮಾಡ್ತಿದ್ದು,ಆಶ್ರಮದಲ್ಲೇ ನೆಲೆಸಿದ್ದರು. ಪತ್ನಿ ಸುಧಾಶ್ರೀ ಜೆ.ಕೆ. ಟೈರ್ಸ್ ಕಾರ್ಖಾನೆಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿಯೊಂದಿಗೆ ಜಗಳವಾಡಿಕೊಂಡು ಬಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಮುರುಳೀಧರ್ ಅವರು ಸೋಮವಾರ ಬೆಳಿಗ್ಗೆ ಆಶ್ರಮ ತೊರೆದ ನಂತರ ನಾಪತ್ತೆಯಾಗಿದ್ದರು.ಈ ನಡುವೆ ಉತ್ತನಹಳ್ಳಿ ಮಾರ್ಗವಾಗಿ ತಮ್ಮ ವಾಹನದಲ್ಲಿ ಬಂದು ರಸ್ತೆಯಲ್ಲೇ ವಾಹನ ನಿಲ್ಲಿಸಿ ಅರಣ್ಯ ಪ್ರದೇಶದಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಂಗಳವಾರ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.