ಮಹಾಕುಂಭ ನಗರ,ಉತ್ತರಪ್ರದೇಶ: ಫೆಬ್ರವರಿ 26 ರಂದು ಮಹಾಕುಂಭಕ್ಕೆ ತೆರೆ ಬೀಳಲಿದೆ. ಈ ಸಮಾರೋಪದ ವೇಳೆಗೆ 2,000 ಹಿರಿಯ ನಾಗರಿಕರಿಗೆ ಸಂಗಮ ಸ್ನಾನದ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಸೋಮವಾರ ಘೋಷಿಸಿದೆ.
ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಮತ್ತು ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO) ಸಹಭಾಗಿತ್ವದಲ್ಲಿ ಸಂಗಮ್ ದಡದಲ್ಲಿ ಸ್ಥಾಪಿಸಲಾದ ಸಮಾಜ ಕಲ್ಯಾಣ ಇಲಾಖೆಯ ಪಂಡಲ್( ಶಿಬಿರ), ಹಿಂದುಳಿದ ಗುಂಪುಗಳಿಗೆ ನಿರ್ಣಾಯಕ ನೆರವು ನೀಡುತ್ತಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶ್ರವಣದೋಷ ಉಳ್ಳವರಿಗೂ ನೆರವು: ಶ್ರವಣ ಕುಂಭವು ಶ್ರವಣ ದೋಷ ಇರುವವರಿಗೆ ಪರೀಕ್ಷೆಗಳು ಮತ್ತು ಸಹಾಯವನ್ನು ನೀಡುವ ಮೂಲಕ ಸಾವಿರಾರು ಜನರಿಗೆ ಸೇವೆ ಸಲ್ಲಿಸುತ್ತದೆ ಎಂದೂ ಹೇಳಿದೆ. ಮಹಾಕುಂಭದಲ್ಲಿ ಮೊದಲ ಬಾರಿಗೆ, ಯೋಗಿ ಆದಿತ್ಯನಾಥ್ ಸರ್ಕಾರವು ವಯೋವೃದ್ಧರು ಮತ್ತು ಶ್ರವಣದೋಷವುಳ್ಳವರಿಗೆ ವಿಶೇಷ ಶಿಬಿರಗಳನ್ನು ಪ್ರಾರಂಭಿಸಿದೆ. ಸಮಾಜ ಕಲ್ಯಾಣ ಇಲಾಖೆಯು ಸ್ಥಾಪಿಸಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಪರೀಕ್ಷೆಗಳು ಮತ್ತು ಸಹಾಯಕ ಸಾಧನಗಳನ್ನು ನೀಡುತ್ತದೆ.
ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ: ವಯಸ್ಸಾದವರು, ವಿಶೇಷವಾಗಿ ಸರ್ಕಾರಿ ವೃದ್ಧಾಶ್ರಮಗಳಿಂದ ಬಂದವರು, ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಹೊಂದಿದ್ದಾರೆ. ಅವರು ಸರ್ಕಾರ ಮಾಡಿರುವ ಈ ಶಿಬಿರಗಳಿಂದ ಕುಂಭಮೇಳದ ದೈವಿಕ ಚೈತನ್ಯವನ್ನು ಅನುಭವಿಸಬಹುದು ಎಂದು ಸರ್ಕಾರ ಹೇಳಿದೆ. ವಿವಿಧ ವೃದ್ಧಾಶ್ರಮಗಳ ಹಿರಿಯ ನಾಗರಿಕರಿಗಾಗಿ ಕುಂಭ ಪ್ರದೇಶದಲ್ಲಿ 100 ಹಾಸಿಗೆಗಳ ಆಶ್ರಮವನ್ನು ಕೂಡಾ ಸ್ಥಾಪಿಸಲಾಗಿದೆ.
ವಯಸ್ಸಾದ ಭಕ್ತರು ಆರಾಮವಾಗಿ ಉಳಿಯಲು, ಸಂಗಮ ಸ್ನಾನ ಮತ್ತು ಮಹಾ ಕುಂಭದ ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಆಶ್ರಮವು ವಿಶೇಷ ವಸತಿಗಳನ್ನು ಒದಗಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿರ್ಜಾಪುರ, ಗೊಂಡಾ, ಸಿದ್ಧಾರ್ಥನಗರ, ಭದೋಹಿ, ಕೌಶಂಬಿ, ಹರ್ದೋಯಿ, ಸೀತಾಪುರ್ ಮತ್ತು ಲಕ್ನೋ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಹಿರಿಯ ನಾಗರಿಕರು ಮಹಾಕುಂಭದಲ್ಲಿ ಭಾಗವಹಿಸಿದ್ದಾರೆ.
ವೃದ್ಧರ ಕಲ್ಯಾಣ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು: ಫೆಬ್ರವರಿ 26 ರೊಳಗೆ 2,000 ಹಿರಿಯ ಭಕ್ತರಿಗೆ ಅಮೃತ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಸಮಾಜ ಕಲ್ಯಾಣ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅಸೀಮ್ ಅರುಣ್, ವೃದ್ಧರ ಕಲ್ಯಾಣ ಮತ್ತು ಸುರಕ್ಷತೆಗೆ ಸರ್ಕಾರದ ಬದ್ಧತೆಯನ್ನು ಇದೇ ವೇಳೆ ಒತ್ತಿ ಹೇಳಿದರು. ರಾಜ್ಯದಾದ್ಯಂತ ಹಿರಿಯ ನಾಗರಿಕರ ಸುರಕ್ಷತೆ, ಗೌರವ, ಆರೋಗ್ಯಕ್ಕಾಗಿ ಡಬಲ್ ಇಂಜಿನ್ ಸರಕಾರ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯು ಮಹಾಕುಂಭ ಕ್ಷೇತ್ರದಲ್ಲಿ ಶ್ರಾವಣ ಕುಂಭವನ್ನು ಆಯೋಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 26 ಮಹಾಕುಂಭದ ಸಮಾರೋಪ: ಜನವರಿ 13ರಿಂದ ಮಹಾಕುಂಭ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ. 144ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭದಲ್ಲಿ ಭಾಗಿಯಾಗಲು ಪ್ರತಿದಿನ ವಿಶ್ವದಾದ್ಯಂತ ಲಕ್ಷಾಂತರ ಯಾತ್ರಿಕರು ಪ್ರಯಾಗರಾಜ್ ಗೆ ಆಗಮಿಸುತ್ತಿದ್ದಾರೆ. ಸೋಮವಾರ ಸಂಜೆಯ ವೇಳೆಗೆ ಸುಮಾರು 35 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಯುಪಿ ಸರ್ಕಾರ ತಿಳಿಸಿದೆ.
ಫೆಬ್ರವರಿ 12 (ಮಾಘಿ ಪೂರ್ಣಿಮಾ) ಮತ್ತು 26 (ಮಹಾಶಿವರಾತ್ರಿ) ರಂದು ವಿಶೇಷ ಪುಣ್ಯ ಸ್ನಾನಗಳು ನಡೆಯಲಿದ್ದು, ಫೆಬ್ರವರಿ 26 ರ ವೇಳೆಗೆ 50-ಕೋಟಿ ಮಂದಿ ಪುಣ್ಯ ಸ್ನಾನ ಮಾಡುವ ಸಾಧ್ಯತೆಗಳಿವೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.
ಇದನ್ನು ಓದಿ:'ರಾಜಕೀಯ ಲಾಭಕ್ಕೆ ಸನಾತನ ಧರ್ಮ ಬಳಸಿಕೊಳ್ಳಬೇಡಿ': ರಾಜಕಾರಣಿಗಳಿಗೆ ಸಂತರ ಖಡಕ್ ಎಚ್ಚರಿಕೆ