ಮೈಸೂರು: ರೈತರ ಬೆಳೆ ಖರೀದಿಸುವ ಖರೀದಿ ಕೇಂದ್ರಗಳು ನಿಗದಿತ ದಿನಕ್ಕೆ ಪ್ರಾರಂಭವಾಗಬೇಕು. ಇದರಲ್ಲಿ ಗೊಂದಲವಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು. ಅಂತಹ ಘಟನೆ ಕಂಡುಬಂದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ರೈತರಿಗೆ ಮಾರಾಟ ಮಾಡಲು ಖರೀದಿ ಕೇಂದ್ರಗಳಿಗೆ ಯಾವ ಯಾವ ದಾಖಲಾತಿ ನೀಡಬೇಕು ಹಾಗೂ ಯಾವ ಸಮಯದಲ್ಲಿ ಪ್ರಾರಂಭವಾಗಲಿದೆ ಮತ್ತು ಬೆಲೆ ನಿಗದಿ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ರೈತರಿಗೆ ಮಾಹಿತಿ ನೀಡಬೇಕು ಎಂದರು.
![mysore DC meeting for farmers crop](https://etvbharatimages.akamaized.net/etvbharat/prod-images/kn-mys-05-paddy-ragi-vis-ka10003_05112019223827_0511f_1572973707_1010.jpg)
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಮಾತನಾಡಿ, ಸರ್ಕಾರವು ಈ ವರ್ಷದ ಕನಿಷ್ಠ ಬೆಂಬಲ ನಿಗದಿ ಮಾಡಿದ್ದು, ಅದರ ಪ್ರಕಾರ ರಾಗಿ ಕ್ವಿಂಟಾಲ್ಗೆ 3150 ರೂ., ಸಾಮಾನ್ಯ ಭತ್ತ ಕ್ವಿಂಟಾಲ್ಗೆ 1815 ರೂ. ಹಾಗೂ ಗ್ರೇಡ್ ಎ ಭತ್ತ ಕ್ವಿಂಟಾಲ್ಗೆ 1835 ರೂ. ನಿಗದಿಯಾಗಿದೆ. ಇದರಲ್ಲಿ ಯಾವ ವ್ಯತ್ಯಾಸ ಆಗಬಾರದು ಹಾಗೂ ರೈತರು ತಮ್ಮ ಬೆಳೆಗಳನ್ನು 50 ಕೆಜಿಯ ಹೊಸ ಗೋಣಿ ಚೀಲಗಳಲ್ಲೇ ತರಬೇಕು. ಭತ್ತ ಮತ್ತು ರಾಗಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ಬಂಡಿಪಾಳ್ಯ ಎಪಿಎಂಸಿ, ನಂಜನಗೂಡಿನಲ್ಲಿ ಬಿಳಿಗೆರೆ ಹಾಗೂ ನಂಜನಗೂಡು, ಟಿ.ನರಸೀಪುರದಲ್ಲಿ ಬನ್ನೂರು ಹಾಗೂ ಟಿ.ನರಸೀಪುರ, ಹುಣಸೂರಿನಲ್ಲಿ ರತ್ನಪುರಿ ಹಾಗೂ ಹುಣಸೂರು, ಕೆ.ಆರ್ ನಗರದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಹುಣಸೂರು ಎಪಿಎಂಸಿ, ಹೆಚ್.ಡಿ ಕೋಟೆಯಲ್ಲಿ ಸರಗೂರು ಮತ್ತು ಪಿರಿಯಾಪಟ್ಟಣದಲ್ಲಿ ಬೆಟ್ಟದಪುರ ಹಾಗೂ ಪಿರಿಯಾಪಟ್ಟಣ ಎಪಿಎಂಸಿಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.