ಮೈಸೂರು: ಪ್ರವಾಸಿಗರನ್ನು ಸೆಳೆಯಲು ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಂಬಾರಿ ಬಸ್ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದ್ದು, ಬಸ್ನ ಟ್ರಯಲ್ ರನ್ ಇಂದು ನಡೆಯಿತು.
ಸಾಂಸ್ಕೃತಿಕ ನಗರಿಗೆ ಪ್ರತಿ ವರ್ಷ ಸುಮಾರು 30 ಲಕ್ಷಕ್ಕೂ ಅಧಿಕ ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಆದರೆ ಕಳೆದ ವರ್ಷ ಕೋವಿಡ್ ಹಿನ್ನೆಲೆ ಪ್ರವಾಸೋದ್ಯಮ ಸಂಪೂರ್ಣ ಕುಸಿದಿತ್ತು. ಹೀಗಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಹೊಸ ಪ್ಲಾನ್ ಸಿದ್ದಪಡಿಸಿದ್ದು, ಅಂಬಾರಿ ಹೆಸರಿನ ಡಬಲ್ ಡೆಕ್ಕರ್ ಬಸ್ ಮೂಲಕ ಅರಮನೆ ನಗರಿಯ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಇಂದು ಅಂಬಾರಿ ಬಸ್ನ ಟ್ರಯಲ್ ರನ್ ನಡೆಯಿತು.
ಈ ಅಂಬಾರಿ ಬಸ್ ನಗರದ ಪ್ರವಾಸೋದ್ಯಮ ಇಲಾಖೆಯಿಂದ ಹೊರಟು ಮೆಟ್ರೋಪಾಲ್ ವೃತ್ತದಿಂದ ಡಿಸಿ ಕಚೇರಿ, ಕ್ರಾಫಡ್ ಹಾಲ್, ಕುಕ್ಕರಹಳ್ಳಿ ಕೆರೆ, ಕೃಷ್ಣರಾಜ ಬುಲೇವಾಡ್ ರಸ್ತೆ, ರಾಮಸ್ವಾಮಿ ವೃತ್ತ ಮೂಲಕ ಪುನಃ ಪ್ರವಾಸೋದ್ಯಮ ಇಲಾಖೆಯ ಕಚೇರಿ ಆವರಣಕ್ಕೆ ಬಂದು ಟ್ರಯಲ್ ರನ್ ಮುಗಿಸಿದೆ.
ಯಾವ ಯಾವ ಮಾರ್ಗದಲ್ಲಿ ಬಸ್ ಚಲಿಸಬೇಕು ಎಂಬ ಬಗ್ಗೆ ರೂಟ್ ಮ್ಯಾಪ್ ಅನ್ನು ಅಧಿಕಾರಿಗಳು ರೆಡಿ ಮಾಡಿದ್ದು, ಶೀಘ್ರವೇ ಡಬಲ್ ಡೆಕ್ಕರ್ ಬಸ್ ಮೂಲಕ ಅರಮನೆ ನಗರಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲಿದ್ದಾರೆ.