ಮೈಸೂರು: ಮಹಾರಾಷ್ಟ್ರದ ಹೊಸ ಮೈತ್ರಿ ಸರ್ಕಾರ 5 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಭವಿಷ್ಯದಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.
ಇಂದು ಮೈಸೂರು ಜಿಲ್ಲೆಯ ಹುಣಸೂರು ಉಪ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವನಾಥ್ ನಿರಂಕುಶ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಇವೆಲ್ಲಾ ಚುನಾವಣೆಗೆ ಮಾಡುತ್ತಿರುವ ತ್ರಂತ್ರಗಾರಿಕೆ. ಈ ರೀತಿ ತಂತ್ರಗಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳದೆ ಇರುವಷ್ಟು ದಡ್ಡರಲ್ಲ ಎಂದು ಹೇಳಿ, ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಬೇಕೆಂಬುದೇ ನಮ್ಮಿಬ್ಬರ ಗುರಿಯಾಗಿದೆ ಎಂದರು.
ಬಿಜೆಪಿ ಅವರ ಹತ್ತಿರ ಆರ್ಥಿಕ ಸಂಪನ್ಮೂಲಗಳಿವೆ. ಅವರು ದುಡ್ಡನ್ನು ಎಲ್ಲಿಗೆ ಸಾಗಿಸಿದರೂ ಕೇಳುವವರಿಲ್ಲ. ಅವರು ಬರಿ ಫೋನ್ ಕಾಲ್ ನಲ್ಲಿಯೇ ದುಡ್ಡನ್ನು ತರಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಆದ್ದರಿಂದಲೇ 15 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.