ಮೈಸೂರು: ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ಹಾಗೂ ಶಿಕ್ಷಣದ ಗುಣಮಟ್ಟ ಮತ್ತಷ್ಟು ಹೆಚ್ಚಿಸಲು ಸರ್ಕಾರದಿಂದ ಪೂರಕವಾದ ಸಹಕಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
![Government colleges will be developed and education standard will be raised: Dr. CN Ashwath narayan](https://etvbharatimages.akamaized.net/etvbharat/prod-images/kn-mys-05-dcm-an-vis-ka10003_20092019145620_2009f_1568971580_498.jpg)
ನಗರದ ಮಹಾರಾಣಿ ಕಲಾ ಕಾಲೇಜಿಗೆ ಭೇಟಿ ನೀಡಿದ ಅವರು ಕಾಲೇಜಿನ ಹೊರಾಂಗಣದಲ್ಲಿ ಕಾಂಪೌಂಡ್ ನಿರ್ಮಿಸಲು ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು. ಕೂಡಲೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಹಾಗೂ ಇಲ್ಲಿ ಹುಡುಗಿಯರು ಮಾತ್ರ ಇದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಮೈಸೂರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಪಡೆದಿದೆ. ಅಂತಹ ನಗರದಲ್ಲಿ ಸರ್ಕಾರಿ ಕಾಲೇಜುಗಳು ಮತ್ತಷ್ಟು ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ. ಶೌಚಾಲಯ, ಕ್ಯಾಂಟೀನ್, ಗ್ರಂಥಾಲಯ ಹೀಗೆ ಹಲವಾರು ಸಮಸ್ಯೆಗಳನ್ನು ಹಲವಾರು ಕಾಲೇಜುಗಳು ಹೊಂದಿದ್ದು, ರಾಜ್ಯಾದ್ಯಂತ ಕಾಲೇಜುಗಳ ಅಭಿವೃದ್ಧಿಗೆ ಹಾಗೂ ಶಿಕ್ಷಣದ ಗುಣಮಟ್ಟಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
![education standard will be raised: Dr. CN Ashwath narayan](https://etvbharatimages.akamaized.net/etvbharat/prod-images/kn-mys-05-dcm-an-vis-ka10003_20092019145620_2009f_1568971580_695.jpg)
ಕಾಲೇಜುಗಳ ಜೊತೆಯಲ್ಲಿ ಐಟಿ - ಬಿಟಿ ಕಂಪನಿಗಳ ಸಂಪರ್ಕವನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕಂಪನಿಗಳ ಒಡನಾಟ ಬೆಳೆಯಲಿದೆ. ಇದರಿಂದ ಶಿಕ್ಷಣ ಮುಗಿದ ನಂತರ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದರು.
ಮಹಾರಾಣಿ ಕಾಲೇಜಿನ ಗ್ರಂಥಾಲಯ ಕಾರಣಾಂತರಗಳಿಂದ ಮುಚ್ಚಲ್ಪಟ್ಟಿದ್ದು, ಪ್ರಾಂಶುಪಾಲರು ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡು ಶೀಘ್ರವಾಗಿ ಗ್ರಂಥಾಲಯ ತೆರೆಯುವಂತೆ ಸೂಚಿಸಿದರು.