ಮೈಸೂರು : ಕಾರಿನಲ್ಲಿ ಮದ್ಯ ಸೇವಿಸಿ, ಕಾರನ್ನು ಲಾಕ್ ಮಾಡಿ ನಿದ್ದೆಗೆ ಜಾರಿದ್ದ ಮಾಜಿ ಸೈನಿಕ, ಕುಳಿತ ಜಾಗದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಆದಿಚುಂಚನಗಿರಿ ರಸ್ತೆಯ ದೋಸಾ ಪಾಯಿಂಟ್ ಬಳಿ ನಡೆದಿದೆ. ಜಯನಗರ ನಿವಾಸಿ ಮಾಜಿ ಸೈನಿಕ ರಾಜ್ ಕುಮಾರ್ (40) ಎಂಬಾತ ಸಾವನ್ನಪ್ಪಿರುವ ವ್ಯಕ್ತಿ. ಕಾರು ಚಾಲಕರಾಗಿ ಕೆಲಸ ಮಾಡ್ತಿದ್ದರು.
ಘಟನೆ ವಿವರ : ಶನಿವಾರ ರಾತ್ರಿ ನಗರದ ಆದಿಚುಂಚನಗಿರಿ ರಸ್ತೆಯ ದೋಸಾ ಪಾಯಿಂಟ್ ಸಮೀಪ ಕಾರು ನಿಲ್ಲಿಸಿ, ಮದ್ಯ ಸೇವಿಸಿ, ಕಾರನ್ನು ಒಳಗಿನಿಂದ ಲಾಕ್ ಮಾಡಿ ಮಲಗಿದ್ದರು. ಇವರು ಕುಳಿತಿದ್ದ ಜಾಗದಲ್ಲೇ ಮೃತಪಟ್ಟಿದ್ದಾರೆ.
ಶವವು ಕಾರಿನ ಸೀಟಿನಿಂದ ಕೆಳಗೆ ಜಾರಿದ್ದರಿಂದ ದಾರಿಹೋಕರಿಗೆ ಗೊತ್ತಾಗಿಲ್ಲ. ಸಂಬಂಧಿಕರು ರಾಜ್ ಕುಮಾರ್ಗೆ ಕರೆ ಮಾಡಿದಾಗ ಅವರು ಸ್ವೀಕರಿಸದೇ ಇದ್ದಾಗ ನಗರದಲ್ಲಿ ಹುಡುಕಾಡಿದ್ದಾರೆ. ಇವರ ಕಾರು ದೋಸಾ ಪಾಯಿಂಟ್ ಸಮೀಪ ಇರುವುದು ಸೋಮವಾರ ಗೊತ್ತಾಗಿದೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಮಿಸಿ ಕಾರನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕಾರಿನೊಳಗೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಅಧಿಕ ಮದ್ಯಸೇವನೆ, ಹೃದಯಾಘಾತ ಅಥವಾ ಕಿಟಕಿಗಳನ್ನೆಲ್ಲ ಹಾಕಿಕೊಂಡಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಚಿತ್ರದುರ್ಗ : ಸಾಲದ ಹಣ ಕೊಡುವುದಾಗಿ ಕರೆಸಿ ವ್ಯಕ್ತಿಯ ಬರ್ಬರ ಹತ್ಯೆ