ಮೈಸೂರು: ಮೈಸೂರಿನ ಮೊದಲ ಕೊರೊನಾ ಪಾಸಿಟಿವ್ ವ್ಯಕ್ತಿ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರು ನಾಗರಿಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಪಾಸಿಟಿವ್ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದಾರೆ. ಬಹುಶಃ ಅವರ ಸ್ಯಾಂಪಲ್ ವರದಿ ನೆಗೆಟಿವ್ ಬರುವ ಸಾಧ್ಯತೆ ಇದೆ. ಇಂದಿಗೆ ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಇಂದು ಅವರ ಪರೀಕ್ಷೆ ನಡೆಸಿ ವರದಿ ತರಿಸಿಕೊಳ್ಳುತ್ತೇವೆ. ಇಂದು ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದರು.
ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆ ಪಾಸಿಟಿವ್ ಪ್ರಕರಣ: ಎಲ್ಲರ ವರದಿ ನೆಗೆಟಿವ್ ಬರುವವರೆಗೆ ಕಾರ್ಖಾನೆ ಬಂದ್ ಕಡ್ಡಾಯ. ಇಡೀ ಕಾರ್ಖಾನೆ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದ ಮೇಲಷ್ಟೇ ಮತ್ತೆ ಕಾರ್ಖಾನೆ ಓಪನ್ ಮಾಡಲು ಸೂಚನೆ ನೀಡಲಾಗುವುದು ಎಂದರು. ಕಾರ್ಖಾನೆ ನೌಕರರಿಗೆ ಕೊರೊನಾ ಹೇಗೆ ತಗುಲಿತು ಅನ್ನೋದರ ಬಗ್ಗೆ ಪೊಲೀಸ್ ತನಿಖೆ ಆಗಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ ಅನ್ನೋ ಮಾಹಿತಿಗೆ ಎಸ್ಪಿ ಅವರೇ ಉತ್ತರ ಕೊಡ್ತಾರೆ. ಚೀನಾದಿಂದ ಬಂದ ಕಂಟೈನರ್ ಹಾಗೂ ಕಚ್ಚಾ ವಸ್ತುಗಳ ಸ್ಯಾಂಪಲ್ ಟೆಸ್ಟ್ ಮಾಡ್ತಿದ್ದೇವೆ ಎಂದರು.
ನಮ್ಮಲ್ಲಿ ಕಂಟೈನರ್ ಹಾಗೂ ಕಚ್ಚಾವಸ್ತು ಸ್ಯಾಂಪಲ್ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆ ಜುಬಿಲೆಂಟ್ಸ್ ಕಾರ್ಖಾನೆಯ ಎಲ್ಲ ಸ್ಯಾಂಪಲ್ ಟೆಸ್ಟ್ ಪುಣೆಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಅದರ ವರದಿ ನಮ್ಮ ಕೈ ಸೇರಲಿದೆ ಎಂದು ತಿಳಿಸಿದರು. ವರದಿ ಬಂದ ನಂತರ ಕಂಟೈನರ್ ಅಥವ ಕಚ್ಚಾವಸ್ತುವಿನಿಂದ ರೋಗ ಸೋಂಕು ಬಂದಿದ್ಯಾ ಅನ್ನೋದು ದೃಢವಾಗಲಿದೆ. ಅದನ್ನ ಬಿಟ್ಟರೆ ಉಳಿದೇಲ್ಲ ತನಿಖೆ ಪೊಲೀಸರೆ ಮಾಡ್ತಾರೆ ಎಂದರು.
ಮೈಸೂರಿನಲ್ಲಿ ತಬ್ಲಿಘಿಗಳ ಪಾಸಿಟಿವ್ ಪ್ರಕರಣ: ಒಟ್ಟು 17 ಮಂದಿ ದೆಹಲಿ ಸಂಬಂಧಿತ ವ್ಯಕ್ತಿಗಳು ಮೈಸೂರಿನಲ್ಲಿದ್ದಾರೆ. ಅದರಲ್ಲಿ 8 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 9 ಮಂದಿಯ ಸ್ಯಾಂಪಲ್ ಪರೀಕ್ಷೆ ಮಾಡುತ್ತಿದ್ದೇವೆ. ಅವರು ಮೈಸೂರಿನಲ್ಲಿ ಧರ್ಮ ಪ್ರಚಾರದ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಮಾಹಿತಿ ನೀಡಿದರು.
ಫೆಬ್ರವರಿಯಿಂದಲೂ ಅವರು ಮೈಸೂರಿನಲ್ಲೆ ಇದ್ದರು. ಮಾರ್ಚ್ನಲ್ಲಿ ಬೆಂಗಳೂರು ಹಾಗೂ ಮಂಡ್ಯಗೆ ಹೋಗಿದ್ದಾಗ ಅವರಿಗೆ ಸೊಂಕು ಬಂದಿದೆ. ಆ ನಂತರ ಅವರು ಮೈಸೂರಿನಲ್ಲಿ ಹೆಚ್ಚು ಓಡಾಡಿಲ್ಲ. ಒಂದು ಕಡೆ ವಾಸ್ತವ್ಯ ಹೂಡಿದ್ದರು ಅಲ್ಲಿನ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಅದನ್ನ ಬಿಟ್ಟರೆ ಸಮುದಾಯಕ್ಕೆ ಹರಡುವುದಾಗಲಿ, ಅಥವಾ ಹೊಸ ವ್ಯಕ್ತಿಗಳಿಗೆ ಪಾಸಿಟಿವ್ ಪತ್ತೆಯಾದ ಪ್ರಕರಣ ಮೈಸೂರಿನಲ್ಲಿಲ್ಲ ಎಂದು ಹೇಳಿಕೆ ಹೇಳಿದರು.